ಮಾಲತೇಶ್ ಅರಸ್ ಹರ್ತಿಮಠ
ಅದು ಅವರ ಬಾಲ್ಯದ ದಿನಗಳ ಸಂಭ್ರಮದ ಕ್ಷಣ, ಸುಮಾರು 76 ವರ್ಷಗಳ ಹಿಂದಿನ ನೆನಪು. ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಆಡಿದ್ದು, ಕುಣಿದದ್ದು, ನಲಿದ ಜಾಗ.
ಹೌದು, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ರಾಮಗಿರಿ ಪುಣ್ಯ ಕ್ಷೇತ್ರವೇ ಜಿಎಸ್ಎಸ್ ಅವರ ಬಾಲ್ಯದ ದಿನಗಳ ಕಳೆದ ಊರು. ಗ್ರಾಮದಲ್ಲಿರುವ ತೇರಿನ ಮನೆಯ ಪಕ್ಕದಲ್ಲೇ ಇದ್ದ ಮನೆಯಲ್ಲಿ ಅವರ ವಾಸ. ತಂದೆ ಜಿ. ಶಾಂತವೀರಪ್ಪ ಅವರು ಇಲ್ಲಿನ ಸರ್ಕಾರಿ ( ಪ್ರಾಥಮಿಕ(ಮಿಡ್ಲಿ ಸ್ಕೂಲ್) ಶಾಲೆಯಲ್ಲಿ ಮೇಷ್ಟ್ರಾಗಿದ್ದವರು. ಆಗ ಜಿಎಸ್ಎಸ್ ಅವರು 5ರಿಂದ 7 ನೇ ತರಗತಿವರೆಗೆ ರಾಮಗಿರಿಯಲ್ಲಿ ಅಧ್ಯಯನ ಮಾಡಿದ್ದರು. ಇನ್ನೂ ವಿಶೇಷ ಎಂದರೇ ಜಿಎಸ್ಎಸ್ ಅವರ ತಾಯಿ ಶಾಂತಮ್ಮರ ತವರೂರಾದ ಹೊಳಲ್ಕೆರೆಯಲ್ಲಿಯೇ ಜಿಎಸ್ಎಸ್ ಜನಿಸಿದ್ದು.
ಬಾಲ್ಯ ಕಳೆದ ರಾಮಗಿರಿಯನ್ನು ಅವರು ಎಂದೂ ಮರೆಯಲಿಲ್ಲ. ಸಾಕಷ್ಟು ಪ್ರಶಸ್ತಿಗಳು ಬಂದರೂ ಇಲ್ಲಿಗೆ ಬಂದು ಹೋಗುತ್ತಿದ್ದರು ಅಲ್ಲದೆ ಬೆಟ್ಟದ ಮೇಲೆ ತೆರಳಿ ಕವಿತೆ ರಚಿಸುತ್ತಿದ್ದರು.
ಹಸಿರು ಸೀರೆಯನುಟ್ಟ ಮರ-ಬಳ್ಳಿಗಳಿಂದ ಕೂಡಿದ ಬೆಟ್ಟ, ಹೂ ಬಿರಿದು ನಿಂತ ಗಿಡಗಂಟೆಗಳು, ಗಂಧ, ಹೊನ್ನೆ, ಬೀಟೆ ಸೇರಿದಂತೆ ವಿವಿಧ ಬಗೆಯ ಮರಗಳ ಸುಮಧುರ ಘಮಲು, ಸುವಾಸನೆಯಿಂದ ಕೂಡಿದ ವನ ಸುಮಗಳು, ಮಕರಂದ ಹೀರುವ ದುಂಬಿಗಳು. ಹಿಂಡಿಡು ಬರುವ ಜೇನು ನೊಣಗಳು, ಸುಂದರತೆಯನ್ನು ಇಮ್ಮಡಿಗೊಳಿಸುವ ಚಿಟ್ಟೆಗಳು, ಕಿವಿಗಿಂಪಾದ ಜಾಗಟೆ ನಿನಾದ, ಕರಡಿಗೆ ಸದ್ದು ಇವೆಲ್ಲವೂ ಜಿಎಸ್ಎಸ್ ಅವರಿಗೆ ಸ್ಪೂರ್ತಿಯಾಗಿದ್ದವು.
ಸುಂದರ ಬೆಟ್ಟಗಳ ನಡುವೆ ಕಾಣುವ ಪಾವನ ಕ್ಷೇತ್ರದೊಳಗೆ ಅವರ ಸಾಕಷ್ಟು ನೆನಪಿನ ಕವಿತೆಗಳಿವೆ. ಕೆರೆಯ ದಂಡೆ ಮೇಲೆ ಕುಳಿತು ಪ್ರಕೃತಿ ಮಡಿಲಲ್ಲಿ ನಲಿದಾಡಿದ್ದಾರೆ. ಶಂಕರನ ಬಂಡೆಯ ಮೇಲೆ ಜಾರುಬಂಡಿ ಆಡಿದ್ದಾರೆ. ಸಾಕಷ್ಟು ಕನಸುಗಳನ್ನು ಅರಳಿಸಿದ್ದಾರೆ.
ರಾಮಗಿರಿ ದರ್ಶನ:
ಹೌದು, ನಿಜಕ್ಕೂ ರಾಮಗಿರಿ ಕರಿಸಿದ್ದೇಶ್ವರ ಇರುವ ಪಾವನ ಕ್ಷೇತ್ರ. ಅಂತೆಯೇ ಸಾಹಿತ್ಯ ಲೋಕದಲ್ಲಿ ನೋಡಿದರೂ ಪಾವನ ಸ್ಥಳವಾಗಿದೆ. ಇವರ ಬಾಲ್ಯದ ದಿನಗಳನ್ನು ಸಂಗ್ರಹಿಸುವಲ್ಲಿ ಶಿಕ್ಷಕ ರಾಮಗಿರಿ ಕರಿಸಿದ್ದಪ್ಪ ಕುಂಬಾರ ಅವರು ಸಾಕಷ್ಟು ರೀತಿಯ ಶ್ರಮ ವಹಿಸಿ ತಯಾರಿಸಿದ ‘ರಾಮಗಿರಿ ದರ್ಶನ’ ಎಂಬ ಸಮಗ್ರ ಧಾರ್ಮಿಕ ಪುಸ್ತಕ ಹಾಗೂ ಕಳೆದ ವರ್ಷ 2012 ರಂದು ‘ರಾಮಗಿರಿ ದಿನ ದರ್ಶಿಕೆ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದರು. ಅದರಲ್ಲಿ ಅವರ ಹಸ್ತಕ್ಷರಗಳೂ, ಬಾಲ್ಯದ ಬರಹಗಳೂ ಇವೆ.
ಬಂಡೆ ಹೂವು:
ರಾಮಗಿರಿ ಪ್ರಕೃತಿ ಸೌಂದರ್ಯದ ಬೆಟ್ಟದ ಮೇಲಿನ ಬಂಡೆಯೊಂದರ ಜತೆ ದೇವ ಕಣಗಿಲ ಹೂವಿನ ಮರಗಳು ಸಾಕಷ್ಟಿವೆ. ಇವುಗಳನ್ನು ಕಂಡು ಜಿಎಸ್ಎಸ್ ಅವರು ಹೂವುಗಳು ಬೆಳೆದಿದ್ದರಿಂದ ಪ್ರೇರೇಪಿತರಾಗಿ ‘ಬಂಡೆ ಹೂ’ ಎಂಬ ಕವಿತೆ ರಚಿಸಿದ್ದಾರೆ. ಅದನ್ನು ಅನುಸರಿಸಿ ಬಂಡೆ ಹೂವು ಸಾಕ್ಷೃ ಚಿತ್ರವಾಗಿದೆ.
ಇದೇ ಡಿಸೆಂಬರ್ 16 ರಂದು ಜರುಗಿದ ಶ್ರೀ ಕರಿಸಿದ್ದೇಶ್ವರ ಸ್ವಾಮಿ ಕಡೇ ಕಾರ್ತಿಕ ಮತ್ತು ಲಕ್ಷ ದೀಪೋತ್ಸವದಲ್ಲಿ ರಾಮಗಿರಿ ಕರಿಸಿದ್ದಪ್ಪ ಕುಂಬಾರ ನಿರ್ದೇಶನದ ಜಿಎಸ್ಎಸ್ ಅವರ ಸವಿ ನೆನಪುಗಳೊಂದಿಗೆ ಸಂಗ್ರಹಿಸಿರುವ ‘‘ಬಂಡೆ ಹೂವು’’ ಎಂಬ ಸಾಕ್ಷೃಚಿತ್ರವನ್ನು ಸಾಹಿತಿ ಚಂದ್ರಶೇಖರ ತಾಳ್ಯ ಅವರು ಬಿಡುಗಡೆ ಮಾಡಿದ್ದರು. ಅದರಲ್ಲಿ ಜಿಎಸ್ಎಸ್ ಅವರ ಬಾಲ್ಯದ ನೆನಪಿನ ಅಪಾರ ಬುತ್ತಿ ಇದೆ. ಕವಿಗಳ ಮಾತಿದೆ. ಬಾಲ್ಯದ ನೆನಪಿದೆ. ಕವಿ ಎಚ್ಎಸ್ ವೆಂಕಟೇಶ್ ಮೂರ್ತಿ ಜತೆ ಗ್ರಾಮಸ್ಥರು ಸನ್ಮಾನಿಸಿದ ಚಿತ್ರಣಗಳಿವೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಂತ ಕುಮಾರ್, ಮುಖಂಡ ಯಾಲಕ್ಕಿ ಬಸವರಾಜಪ್ಪ ಅವರ ಮಾತುಗಳಿವೆ.
ಕೋಟ್.
ಕವಿಯಾಗಿ, ವಿಮರ್ಶಕರಾಗಿ, ಪ್ರಾಧ್ಯಾಪಕರಾಗಿ ಅವರ ಕೊಡುಗೆ ಅನನ್ಯ. ಘನತೆವೆತ್ತ ಪ್ರಾಧ್ಯಾಪಕ, ಸರ್ವಶ್ರೇಷ್ಠ ಸಂಘಟಕ, ಕವಿ, ವಿಮರ್ಶಕ. ಪದ್ಯ- ಗದ್ಯ ಎರಡರಲ್ಲೂ ಅವರು ನಿಸ್ಸೀಮರಾಗಿದ್ದರು. ಅವರೊಂದಿಗಿದ್ದ ದಿನಗಳು ಇನ್ನೂ ನೆನಪು ಮಾತ್ರ.
ಚಂದ್ರಶೇಖರ ತಾಳ್ಯ. ಹಿರಿಯ ಕವಿ.
ಕೋಟ್.
ಕನ್ನಡದ ಮೇರುಕವಿಯ ಅಗಲಿಕೆಯಿಂದ ರಾಮಗಿರಿ ಗ್ರಾಮದ ಮೇಲೆ ಮೋಡ ಮುಸುಕಿದೆ. ರಾಷ್ಟ್ರಕವಿಯ ಕಣ್ಮರೆಯಿಂದ ಕರ್ನಾಟಕಕ್ಕೆ ತುಂಬಲಾರದ ಹಾನಿಯಾಗಿದೆ. ರಾಮಗಿರಿ ಇದೀಗ ಅನಾಥವಾಗಿದ್ದು ನಮಗಿನ್ನು ನೆನಪು ಮಾತ್ರ. ಪ್ರತಿ ವರ್ಷ ರಾಮಗಿರಿಯಲ್ಲಿ ಜಿಎಸ್ ಶಿವರುದ್ರಪ್ಪ ಸಾಹಿತ್ಯ ವೇದಿಕೆ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ಆಚರಿಸುತ್ತೇವೆ. ಜನವರಿ 18ರಂದು ಬಂಡೆ ಹೂವು ಕವಿತೆಯ ಶಿಲಾಶಾಸನ ಅನಾವರಣ ನಡೆಯಲಿದೆ.
ರಾಮಗಿರಿ ಕರಿಸಿದ್ದಪ್ಪ ಕುಂಬಾರ, ಸಾಹಿತಿ





.png)
