Tuesday, March 25, 2014

ಹಾಲುಮತ ಕುರುಬ ಮತ್ತು ಲಿಂಗವಂತ....

‘ಸಂಶೋಧನೆಯ ಲೇಖನಗಳಲ್ಲ, ತೀರ್ಪಿನ ಲೇಖನಗಳು’ (ಸಂಗತ ಡಿ.15, ಕೆ.ಆರ್. ಬಸವರಾಜ) ಲೇಖನಕ್ಕೆ ಪ್ರತಿಕ್ರಿಯೆ: ಲೇಖಕರು ಎರಡು ಆಕ್ಷೇಪಗಳನ್ನು ಎತ್ತಿ ಒಂದು ಆಸರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
‘ನಾಗರಿಕ ಮನುಷ್ಯಕುಲದ ಚರಿತ್ರೆ ಆರಂಭವಾಗುವುದು ಪಶುಪಾಲಕರಾದ ಹಟ್ಟಿಕಾರರಿಂದ’ ಎಂಬ ಶಂ.ಬಾ.ಜೋಶಿಯವರ ನುಡಿ ಇಲ್ಲಿ ಹೆಚ್ಚು ಪ್ರಸ್ತುತ. ಹಟ್ಟಿಕಾರರ (ಪಶುಪಾಲಕ - ಪಟ್ಟಿಕಾರ) ಪ್ರಾಚೀನತೆಗೆ ಪ್ರಾಚೀನ ಹಬ್ಬ, ಪ್ರಥಮ ಬೆಳೆಗಳಾದ ಹಟ್ಟಿಹಬ್ಬ (ದೀಪಾವಳಿ) ಮತ್ತು ಹತ್ತಿ (ಹಟ್ಟಿಕಾರರ ಬೆಳೆ) ಬೆಳೆಗಳು ಸಾಕ್ಷಿಯಾಗಿ ಉಳಿದಿವೆ. ಇಂತಹ ಹಟ್ಟಿಕಾರರ (ವಿಶಾಲ ಹಾಲುಮತ) ಸಮುದಾಯದಿಂದ ಹೊರ ಹರಿವು ಪಡೆದು ಜನ್ಮ ತಳೆದ ಗೊಲ್ಲ, ಗೋವುಳ, ಈಡಿಗ, ಒಕ್ಕಲಿಗ, ನಾಡವ, ಬೇಡ, ಭಟ್ಟಿ, ಜೇಡ, ರಜಪೂತ ಇತ್ಯಾದಿ ಅಸಂಖ್ಯ ಜಾತಿ ಜನಾಂಗವನ್ನು ತಜ್ಞರು ಗುರುತಿಸಿದ್ದಾರೆ. ಪಶುಪಾಲಕರ ಮೂಲ ಸಂಪ್ರದಾಯ, ಆಚರಣೆ ಮತ್ತು ನಂಬಿಕೆಗಳನ್ನು ಉಳಿಸಿಕೊಂಡು ‘ಹಾಲುಮತ’ ಎಂದು ಕರೆಸಿಕೊಳ್ಳುತ್ತಿರುವ ಪ್ರಸ್ತುತ ಕುರುಬ ಜನಾಂಗ ಅದರ ಒಂದು ಘಟಕ ಮಾತ್ರ.
ಮೊದಲನೆಯ ಆಕ್ಷೇಪ, ಬಸವರಾಜ ಅವರು ‘ಒಂದು ಜಾತಿಗೆ ಸೇರಿದ ವ್ಯಕ್ತಿಗಳು ಒಬ್ಬ ಪೂಜನೀಯ ವ್ಯಕ್ತಿಯ ಪೂಜೆಯನ್ನು ಕೈಗೊಂಡರೆ ಮತ್ತು ಆ ಜನಾಂಗ ಅವನನ್ನು ಆರಾಧಿಸಿದರೆ ಪೂಜನೀಯ ವ್ಯಕ್ತಿ ಆ ಜಾತಿಗೆ ಸೇರಲಾರ’ ಎಂಬ ತೆಳುವಾದವನ್ನು ಕೇವಲ ಒಂದು ದೇವಸ್ಥಾನದ ಉದಾಹರಣೆ ಕೊಟ್ಟು ಹೇಳುತ್ತಾರೆ. ಮಹಾರಾಷ್ಟ್ರ, ಉತ್ತರ, ಮಧ್ಯ ಮತ್ತು ದಕ್ಷಿಣ ಕರ್ನಾಟಕದ ನೂರಾರು ರೇವಣಸಿದ್ಧರ, ಸಿದ್ಧರಾಮರ ದೇವಸ್ಥಾನಗಳಲ್ಲಿ ನಡೆಯುವ ಪೂಜೆ, ಆಚರಣೆಗಳನ್ನು ಇವರು ಗಮನಿಸಬೇಕಾಗಿದೆ. ಮಧ್ಯ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳಲ್ಲಿರುವ ರೇವಣಸಿದ್ಧ ಮತ್ತು ಸಿದ್ಧರಾಮರ ಮಠಗಳ ಆಶ್ರಯದಲ್ಲಿ ನಡೆಯುವ ಬೀರದೇವರ ‘ದಳವಾಯಿ (ಕುರುಬ ಜನಾಂಗದ ಜೀವಂತ ಬೀರದೇವರು) ಸಂಪ್ರದಾಯ’ ಮತ್ತು ಕಡೂರು ತಾಲೂಕಿನ ಖಂಡುಗದಹಳ್ಳಿ ಸುತ್ತಮುತ್ತಲಿನ ನಲವತ್ತು ಗ್ರಾಮಗಳಲ್ಲಿ ಇಂದಿಗೂ ಆಚರಣೆಯಲ್ಲಿರುವ ‘ಭಿಂಗಯ್ಯ (ಕುರುಬ ಜನಾಂಗದ ಜೀವಂತ ಗುರು ಸೋಮೇಶ್ವರ) ಸಂಪ್ರದಾಯಗಳು ಸುಮಾರು ಎಂಟು ನೂರು ವರ್ಷಗಳ ಹಿಂದೆ ರೇವಣಸಿದ್ಧ ಮತ್ತು ಸಿದ್ಧರಾಮರು ಹುಟ್ಟು ಹಾಕಿದ ಆಚರಣೆಗಳಾಗಿವೆ. ಇವು ಕುರುಬ ಜನಾಂಗ ಮತ್ತು ಸಿದ್ಧರೇವಣ, ಸಿದ್ಧರಾಮರ  ಧಾರ್ಮಿಕ ಕರುಳ ಬಳ್ಳಿಯ ಸಂಬಂಧಗಳ ದ್ಯೋತಕವೆನ್ನಬಹುದು.
ಎಲ್ಲ ಜಾತಿಯವರು ಈ ಪುಣ್ಯಪುರುಷರನ್ನು ಪೂಜಿಸುತ್ತಿರಬಹುದು. ಆದರೆ ತಾವೇ ಸೂಚಿಸಿದ ಜಾತಿಗಳು ವಿಶಾಲ ಹಾಲುಮತದ ವ್ಯಾಪ್ತಿಯಲ್ಲಿ ಬರುವುವೆಂದು ಇವರೇಕೆ ಗಮನಿಸುವುದಿಲ್ಲ? ಜಾತಿಯನ್ನು ಇಂದಿನ ಸಂಕುಚಿತ ದೃಷ್ಟಿಯಿಂದ ನೋಡದೆ, ಪ್ರಸ್ತುತ ವೃತ್ತಿ ಆಧಾರಿತ ಜಾತಿ ನಿರ್ಮಾಣದ ಮೂಲ ನೆಲೆ ಹಟ್ಟಿಕಾರರು-ಪಶುಪಾಲಕರು-ಹಾಲುಮತಸ್ಥರು ಎಂಬ ಸಿದ್ಧಾಂತವು ಪ್ರತಿ ಸಂಶೋಧನೆಯ ಸತ್ಯ ದರ್ಶನವೆಂಬುದನ್ನು ಕಲಬುರ್ಗಿಯವರನ್ನು ಟೀಕಿಸುವವರು ಅರ್ಥ ಮಾಡಿಕೊಳ್ಳಲಿ. ಎರಡನೆಯದಾಗಿ, ರೇವಣಸಿದ್ಧನು ಕುರುಬ ಜನಾಂಗ ಮೂಲದವನು ಎಂದು ಮಹಾರಾಷ್ಟ್ರದ ಪ್ರಸಿದ್ಧ ವಿದ್ವಾಂಸರಾದ ಡಾ. ರಾಮಚಂದ್ರ ಚಿಂತಾಮಣಿ ಡೇರೆ ಅವರು ‘ರೇವಣಸಿದ್ಧರ ಸ್ಥಾನ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ‘ಅಪ್ಪಾಚಿವಾಡಿ’. ಇವನು ದುಗ್ಧ ಸಂಪ್ರದಾಯದ ಧನಗಾರ(ಕುರುಬ) ಮೂಲದ ಪೂಜನೀಯ ವ್ಯಕ್ತಿ’ ಎಂದು ಪ್ರತಿಪಾದಿಸಿದ್ದಾರೆ (ಡಾ. ರಾ. ಚಿ. ಢೇರೆ, ಮಲ್ಲಿಕಾರ್ಜುನ ಮತ್ತು ಮಹಾರಾಷ್ಟ್ರ).
ಎರಡನೆಯ ಆಕ್ಷೇಪ, ‘ಕುರುಬರ ಪರಿಷ್ಕೃತ ರೂಪ ಕುಡು ಒಕ್ಕಲಿಗರು (ಲಿಂಗಾಯತದ ಒಂದು ಪಂಗಡ)’ ಎಂಬ ಎಂ.ಎಂ. ಕಲಬುರ್ಗಿ ಅವರ ವಾದವನ್ನು ಲೇಖಕರು ಪೂರ್ವಗ್ರಹ ಪೀಡಿತರಾಗಿ ಟೀಕಿಸುತ್ತಾರೆ. ‘ಯಾವುದೇ ಜನಾಂಗದ ಮೂಲ ಆ ಜನಾಂಗದ ದೈವಗಳು, ಗುರು ಪರಂಪರೆ ಮತ್ತು ಧಾರ್ಮಿಕ ಆಚರಣೆಗಳಿಂದ ಹೊರಹೊಮ್ಮುತ್ತದೆ.’ ಇವರೊಮ್ಮೆ ಇವೆರಡೂ ಜನಾಂಗಗಳ ದೈವ, ಪರಂಪರೆ ಮತ್ತು ಆಚರಣೆಗಳತ್ತ ದೃಷ್ಟಿಹರಿಸಲಿ. ಕುರುಬರ ಬೀರಪ್ಪ, ಗುಡ್ಡದ ಮಲ್ಲಯ್ಯ, ಮೈಲಾರ ದೈವಗಳು ಲಿಂಗವಂತರಲ್ಲಿ ವೀರಭದ್ರ, ವಿರೂಪಾಕ್ಷ, ಮಲ್ಲಿಕಾರ್ಜುನರಾಗಿದ್ದಾರೆ. ಕುರುಬರ ದೈವೀಪುರುಷರಾದ ದಳವಾಯಿ, ಈರಗಾರರು ಲಿಂಗವಂತರಲ್ಲಿ ಪುರವಂತರಾಗಿದ್ದಾರೆ. ಕುರುಬರ ಕುಲಗುರುಗಳು (ಇವರನ್ನು ರೇವಣಸಿದ್ಧರು ಹುಟ್ಟುಹಾಕಿದ್ದಾರೆ) ಒಡೆಯರು. ಲಿಂಗವಂತರಲ್ಲಿ ಜಂಗಮರಾಗಿ (ಐನೋರು) ಪರಿಷ್ಕೃತಗೊಂಡಿದ್ದಾರೆ. ಹಾಲುಮತ ಕುರುಬರ ಕುಲದೈವ ಬೀರಪ್ಪ ಮುಳ್ಳು ಗದ್ದುಗೆಯೇರಿ ಅಗಿ ಹಾಯುವ ಆಚರಣೆಯು ಇಂದು ಲಿಂಗವಂತರಲ್ಲಿ ಗುಗ್ಗುಳಾಚರಣೆಯಾಗಿ ಪರಿವರ್ತನೆಗೊಂಡಿದೆ.
ಹೀಗೆ ಅನೇಕ ಅಚರಣೆಗಳನ್ನು ಲಿಂಗವಂತವು ಸ್ವೀಕರಿಸಿದೆ. ಲಿಂಗವಂತವು ಧಾರ್ಮಿಕ ದೇಹ ರಚನೆ ಪಡೆದು ‘ವೀರಶೈವ’ ಆದ ತಕ್ಷಣ ಮೂಲವು ಮರೆಯಾಗುವುದಿಲ್ಲ. ಇವೆಲ್ಲ ಮೂಲ ಆಕರಗಳ ಅಧ್ಯಯನ ನಡೆಸಿ ಡಾ.ಎಂ.ಎಂ. ಕಲಬುರ್ಗಿಯವರು ಮೇಲಿನ ನಿರ್ಣಯಕ್ಕೆ ಬಂದಿರುತ್ತಾರೆ. ಒಂದರ್ಥದಲ್ಲಿ ಕೇವಲ ಕುಡು ಒಕ್ಕಲಿಗರಲ್ಲ. ಲಿಂಗವಂತರ ಪ್ರಮುಖ ಪಂಗಡಗಳಾದ ನೊಣಬ (ಕುರುಬರಲ್ಲಿ ನೊಳಂಬ ಕುಲ), ಸಾದ (ಕುರುಬರಲ್ಲಿ ಸಾದ ಕುಲ), ಕುಡು ಒಕ್ಕಲಿಗ ಮತ್ತು ರಡ್ಡಿ (ಕುರುಬರಲ್ಲಿ ರಟ್ಟ ಕುಲ) ಇವರೆಲ್ಲ ಕುರುಬದ ಪರಿಷ್ಕೃತ ರೂಪಗಳು ಎಂಬುದೂ ಗುಟ್ಟಾಗಿ ಉಳಿದಿಲ್ಲ. ಈ ಪ್ರಕ್ರಿಯೆಯನ್ನು ಎರಡು ಜನಾಂಗಗಳ ಸಂಕರಶೀಲತೆ ಎಂದೂ ದಾಖಲಿಸಬಹುದು ಅಲ್ಲವೇ?
ಲೇಖಕರು ತಮ್ಮ ಆಸರೆಗಾಗಿ ಜಿ. ವೆಂಕಟಸುಬ್ಬಯ್ಯನವರ ಮಾತುಗಳನ್ನು ಎಳೆದು ತಂದಿದ್ದಾರೆ. ವೆಂಕಟಸುಬ್ಬಯ್ಯನವರ ಹೇಳಿಕೆ ಶೃದ್ಧಾವಂತ ಸಂಶೋಧಕನ ದೃಢತೆ, ಆತ್ಮವಿಶ್ವಾಸ ಕುರಿತ ಮೆಚ್ಚುಗೆಯಾಗಿದೆ. ಇದನ್ನು ಬಸವರಾಜರು ತಮ್ಮ ಮೂಗಿನ ನೇರಕ್ಕೆ ತಿರುಚಿ ಅರ್ಥೈಸಿರುವುದು ಅಪಾರ್ಥವೆನ್ನಬಹುದು.ಕಲಬುರ್ಗಿ ಅವರನ್ನು ಇಡಿಯಾಗಿ ಓದದೆ ಬಿಡಿಬಿಡಿಯಾಗಿ ಓದಿದವರ ಸ್ಥಿತಿ ಇದು.

Tuesday, March 4, 2014

Katte Hole Solar Story _ Malathesh Ursಮಾಲತೇಶ್‌ ಅರಸ್‌- ಕತ್ತಲೆಯ ಕತ್ತೆ ಹೊಳೆಯಲ್ಲಿ ಸಂಭ್ರಮದ ಬೆಳಕು...

ಕತ್ತೆಹೊಳೆಯಲ್ಲಿ ಸದಾ ಬೆಳಕು.



-ಮಾಲತೇಶ್‌ ಅರಸ್‌
ಇಂದು ಇಡೀ ರಾಜ್ಯ ಕತ್ತಲೆಯಲ್ಲಿ ಕಾಲ ಕಳೆಯುತ್ತಿದೆ. ಓದುವ ಮಕ್ಕಳು ಸೀಮೆಎಣ್ಣೆ ಬುಡ್ಡಿಯ ಮುಂದೆ ಕುಳಿತಿದ್ದಾರೆ. ರೈತರು ಕಂಗಾಲಾಗಿದ್ದಾರೆ. ಕೈಗಾರಿಕೆಗಳ ಸ್ಥಬ್ತವಾಗುತ್ತಿವೆ. ಮಳೆಬಾರದೆ ಬಿತ್ತಿದ ಬೀಜಗಳೆಲ್ಲ ಸಾವನ್ನಪ್ಪಿವೆ. ನೆಲವಂತೂ ಬಿರುಕು ಬಿಟ್ಟು ಮೌನವಾಗಿದೆ. ಸರ್ಕಾರದ ಅವಿವೇಕತನದಿಂದಾಗಿ ಎಲ್ಲಿ ನೋಡಿದ್ರೂ ಕತ್ತಲೆ ಕತ್ತಲೆ ಕತ್ತಲೆ.  ಆದ್ರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗುಡಿಸಲು ಗ್ರಾಮ ಕತ್ತೆಹೊಳೆಯಲ್ಲಿ ಮಾತ್ರ ಸದಾ ಬೆಳಕು. ಕೆಇಬಿ ಬಿಲ್ ಕಟ್ಟೊಂಗ್ ಇಲ್ಲ ಆದ್ರೂ ಇಲ್ಲಿ  ಸದಾ ಬೆಳಕಿನ ಬದುಕು.
 ಇಲ್ಲಿ ಒಂದು ಕಾಲದಲ್ಲಿ ಕತ್ತಲ ಸಾಮ್ರಾಜ್ಯ, ಹಾವು ಚೇಳುಗಳ ರಾಜ್ಯಭಾರ, ಚಿರತೆ, ಕರಡಿಗಳ ಚೀತ್ಕಾರ. ಬೆಳಕಿಲ್ಲದೆ ಪರದಾಡಿ ಅಕ್ಷರ ಮರೆತ ಮಕ್ಕಳು.  ಕತ್ತಲೆಯಲ್ಲಿಯೇ ಬದುಕು ಸಾಗಿಸಿದ ನಾರಿಯರು. ಓಟು ಪಡೆದು ಕೈ ಕೊಟ್ಟ ರಾಜಕಾರಣಿಗಳು. ಆದ್ರೆ ಇದೀಗ ಇಂದು ಕತ್ತಲೆ ದೂರಾಗಿದೆ. ಬೆಳಕು ನಳನಳಿಸುತ್ತಿದೆ.
       ಚಿತ್ರದುರ್ಗ ಜಿಲ್ಲೆ ಹಿರಿಯೂರಿನಿಂದ 30 ಕೀಲೊ ಮೀಟರ್ ಕಾಡ ಹಾದಿಯಲ್ಲಿ ಸಾಗಿದರೆ ಸಿಗುವುದೇ ಈ ಕತ್ತೆಹೊಳೆ ಗ್ರಾಮ. ನಿಜಕ್ಕೂ ಇದು ಕತ್ತೆಹೊಳೆ ಅಲ್ಲ ಕತ್ತಲೆಹೊಳೆ ಗ್ರಾಮ ಅನ್ನಬಹುದು. ಸದಾ ಕತ್ತಲೆಯಲ್ಲಿದ್ದ ಗ್ರಾಮದಲ್ಲಿ ಸೀಮೆಎಣ್ಣೆ ಬುಡ್ಡಿಗಳೇ ಲೈಟುಗಳು.  ಆದ್ರೆ ಕತ್ತಲೆಯ ಜಗತ್ತು. ಕತ್ತಲ ಬದುಕ ಕಂಡ ಸೋಲಾರ್ ಸೇಲ್‌ಕೋ ಕಂಪನಿ ಈ ಗ್ರಾಮಕ್ಕೆ ಬೆಳಕು ನೀಡಿದೆ. ಇದೀಗ ಇಲ್ಲಿ   ಬೆಸ್ಕಾಂ ಕಾಟ ಇಲ್ಲದಂತೆ ಬೆಳಕಿನ ಬದುಕು ಇದೆ.
 ಸುಮಾರು 40-50 ವರ್ಷಗಳಿಂದ ಸರ್ಕಾರದ ಪೊಳ್ಳು ಅಶ್ವಾಸನೆಗಳನ್ನು ಕೇಳಿಕೇಳಿ ರೋಸಿ ಹೋಗಿದ್ದ ಮುಗ್ದ ಜನರು ಇಂದು ಸರ್ಕಾರ ಭರವಸೆಗಳನ್ನು ಗಾಳಿಗೆ ತೂರಿ ತಾವೇ ಬೆಳಕು ಕಂಡುಕೊಂಡಿದ್ದಾರೆ. ಕತ್ತೆಹೊಳೆ ಗ್ರಾಮದವರು ತಮ್ಮ ಅರ್ಧ ಜೀವನವನ್ನು ಬರೀ ಕತ್ತಲಲ್ಲೆ ಕಳೆದಿದ್ದಾರೆ. ಇನ್ನು ಸಹಾಯ ಮಾಡುವವರು ಬರೀ ಸುಳ್ಳು ಅಶ್ವಾಸನೆಗಳಲ್ಲೆ ದಶಕಗಳನ್ನು ಕಳೆದಿದ್ದಾರೆ.      
   ಈ ಗ್ರಾಮಕ್ಕೆ ಬೆಳಕನ್ನು ಕೊಡಲು ಮುಂದೆ ಬಂದ ಸೇಲ್ ಕೋ ಕಂಪನಿ ಇವರ ಮನವೊಲಿಸಲು ಹರಸಹಾಸ ಪಡಬೇಕಾಯಿತು. ನಂತರ ಸೂರ್ಯನ ಪ್ರಕಾಶವನ್ನು ಬಡವರಿಗೆ ನೀಡಿದೆ. ಸೋಲಾರ್ ನ ಸೇಲ್ ಕೋ ಕಂಪನಿ ಈ ಗ್ರಾಮಕ್ಕೆ ಬೆಳಕನ್ನು ತರುವ ಪ್ರಯತ್ನಕ್ಕೆ ಮುಂದಾದಾಗ ಹಳ್ಳಿಯ ಜನರು ಸುತಾರಾಂ ಒಪ್ಪಲೆ ಇಲ್ಲ, ನಿತ್ಯಕತ್ತಲೆಯ ಬದುಕನ್ನು ಸೋಲಾರ್ ಲೈಟುಗಳು ದೂರಮಾಡಿವೆ. ಈ ಒಂದು ಪ್ರಯತ್ನದಿಂದ ಪ್ರಗತಿ ಗ್ರಾಮಿಣ ಬ್ಯಾಂಕ್ ಕೂಡ  ಗ್ರಾಮಸ್ಥರಿಗೆ ಸಹಾಯ ಹಸ್ತ ಚಾಚಿದೆ.

ಹಳ್ಳಿಗೆ ಬೆಳಕು ತಂದು ಮಕ್ಕಳ ಭವಿಷ್ಯ ರೂಪಿಸಬೇಕು ಅನ್ನೊ ಬಯಕೆಯಿಂದ ಸುಮಾರು ಮನೆ ಬಾಗಿಲು ತಿರುಗಿದ ಗ್ರಾಮಸ್ಥರು, ಸೋಲಾರ್ ಬಂದ ಮೇಲೆ ನಿಶ್ಚಿಂತೆ ಇಂದ ಇದ್ದಾರೆ. ಸೇಲ್ ಕೋ ಕಂಪನಿ ಯೂ ಬ್ಯಾಂಕಿಗೆ 15 ಪರ್ಸೆಂಟ್ ಮಾರ್ಜಿನ್  ಹಣವನ್ನು ಕಟ್ಟಿ ಸುಮಾರು  ಅರ್ಧ ಊರಿಗೆ ಕರೆಂಟ್ ತರೋ ಪ್ರಯತ್ನ ಮಾಡಿದೆ.
       ಸುಮಾರು 300 ಕ್ಕೂ ಹೆಚ್ಚು ಜನ ಈ ಇರೋ ಗ್ರಾಮದಲ್ಲಿ ಸಾಕಷ್ಟು ಮಕ್ಕಳಿದ್ದಾರೆ. ಆದ್ರೆ ಇಲ್ಲಿ ಇನ್ನು ಕೂಡಾ ಅನೇಕ ಮೂಲ ಭೂತ ಸೌಕರ್ಯಗಳು ಇಲ್ಲ. ಜನತೆ ನಲುಗಿ ಹೋಗಿದ್ದಾರೆ. ರಸ್ತೆ, ನೀರು, ಶಾಲೆ. ಅಂಗನವಾಡಿ ಇಲ್ಲಿ  ಇಲ್ಲವೆ ಇಲ್ಲ. ಈ ಬಗ್ಗೆ  ಓಟು ಹಾಕಿಸಿಕೊಂಡ ಭೂಪರು ಮರೆತು ಹೋಗಿದ್ದಾರೆ ಎಂದು  ಆಕ್ರೋಶ ವ್ಯಕ್ತ ಪಡಿಸುತ್ತಾರೆ  ಕತ್ತೆಹೊಳೆ ಗ್ರಾಮಸ್ಥರು.
ಕೇವಲ ಸಾಪ್ಟ್ ವೇರ್ ಎಂಜಿನಿಯರ್ಗಳ ಸಂಖ್ಯೆ, ಕಂಪನಿಗಳ ಸಂಖ್ಯೆ ಹೆಚ್ಚಿದರೇ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾದ  ಮಾತ್ರಕ್ಕೆ ಕರ್ನಾಟಕ ಅಭಿವೃದ್ದಿ ಹೊಂದಿದೆ ಎಂದು ಹೇಳಲಾಗದು,  ಗ್ರಾಮೀಣ  ಪ್ರದೇಶಗಳ ಕಷ್ಟನೂ ಗೊತ್ತಾಗಬೇಕು. ಸರ್ಕಾರ ಕರೆಂಟ್ ತರೋ ನಂಬಿಕೆ ಅಂತೂ ಇಲ್ಲ ಕೊನೆಪಕ್ಷ ಸೋಲಾರ್ ಲೈಟ್ ಗಳನ್ನು ತರುವಲ್ಲಿ ಸರ್ಕಾರ ಸಹಾಯ ಮಾಡುತ್ತ ನೋಡಬೇಕು. ಒಟ್ಟಾರೆ ಇಂಥ ಹಳ್ಳಿಗಳಿಗೆ ಟೈಮ್ ಟೈಮ್ ಗೆ ಓಟು ಕೇಳಲು ಹೋಗುವ ನಾಯಕರು ಕೊನೆ ಪಕ್ಷ ಸಣ್ಣ ಪುಟ್ಟ ಮೂಲಭೂತ ಸೌಕರ್ಯಗಳನ್ನು ಹೊದಗಿಸುವಲ್ಲಿ ವಿಫಲವಾಗಿದೆ. ಆಗಲಿ ರಾಜ್ಯದಲ್ಲಿ ಕತ್ತಲೆಯ ಮೋಡ ಕವಿದಿದ್ದ ಇ ಈ ಗ್ರಾಮದಲ್ಲಿ ಮಾತ್ರ ಕತ್ತಲೆ ದೂರಾಗಿ ಬೆಳಕು ನಳನಳಿಸುತ್ತಿದೆ.


ಮಾಲತೇಶ್‌ ಅರಸ್‌


ಹಾಯ್ಕು ಅಂದರೇನು?
ಇದೊಂದು ಬಹುಮುಖ್ಯ ಹಾಗೂ ಬಹುಮುಖಿ ಪ್ರಶ್ನೆ. ಕಣ್ಣಿಗೆ ಕಂಡ ಕವಿತೆಗಳ ಮೇಲೆ ‘ಇದು ಹಾಯ್ಕು..’ ಅಂತೆಲ್ಲ ಆರೋಪ ಹೊರಿಸಬಹುದೇ? ಹಾಯ್ಕು ಅನ್ನುವದು ಗದ್ಯವಾ? ಪದ್ಯವಾ? ಅಥವಾ ಇನ್ನೇನಾದರೂ ಇದರೊಳಗೆ ಉಂಟಾ? ಯಾವುದನ್ನು ನಾವು ಹಾಯ್ಕು ಅಂತ ಗುರುತಿಸಬಹುದು- ಇವೇ ಮೊದಲಾದ ಪ್ರಶ್ನೆಗಳಿಗೆ ಸರಳರೀತಿಯಲ್ಲಿ ವಿವರಿಸಲು ಸಾಧ್ಯವಾದೀತೆ ಅಂತ ಯೋಚಿಸುತ್ತಿದ್ದಾಗ ಈ ಲೇಖನ ಸಿದ್ಧಪಡಿಸುವ ಯೋಚನೆ ಬಂತು.
ಹಾಗೆ ನೋಡಿದರೆ,ಹಾಯ್ಕು ಅನ್ನುವದೇ ನಮಗೆ ಒಂದು ಅಪರಿಚಿತ pronunciation. ತೀರ ಆಳವಾಗಿ ಗಮನಿಸಿದಾಗ ನನ್ನ ಅರಿವಿಗೆ ಬಂದಿದ್ದೇನೆಂದರೆ,ಯಾವುದೇ ಒಂದು ಅಪರಿಚಿತ ಘಟನೆ,ಅಪರಿಚಿತ ಹೆಸರು ಅಥವಾ ಅಪರಿಚಿತ ಉಚ್ಚಾರಣೆ ನಮ್ಮಲ್ಲೊಂದು ಗುಪ್ತ ಆಕರ್ಷಣೆ ಅಥವಾ ಗುಪ್ತ ವ್ಯಾಮೋಹ ಅಥವಾ ಗುಪ್ತ ಸೆಳೆತವನ್ನು ಹುಟ್ಟುಹಾಕಬಲ್ಲದು!
ಸರಳ ಉದಾಹರಣೆಯೆಂದರೆ,ನಾನು ಇಬ್ಬರು ಅಪರಿಚಿತ ಹುಡುಗಿಯರನ್ನು ಭೇಟಿಯಾಗಬೇಕಿದೆ ಅಂತಿಟ್ಟುಕೊಳ್ಳಿ.ಅವರಲ್ಲಿ ಒಬ್ಬಳ ಹೆಸರು ಸಂಗೀತ,ಇನ್ನೊಬ್ಬಳು ಸ್ಯಾನುರೀಟಾ. ಇಬ್ಬರೂ ನನಗೆ ಪರಿಚಯವಿಲ್ಲ. ಮತ್ತು ನಾನು ಅವರನ್ನು ಒಮ್ಮೆಯೂ ಭೇಟಿಯಾಗಿಲ್ಲ. ಇಂಥ ಸಂದರ್ಭದಲ್ಲಿ ನಾನು ಹೆಚ್ಚು ಕುತೂಹಲ ವ್ಯಕ್ತಪಡಿಸುವದು ಸ್ಯಾನುರೀಟಾಳ ಬಗ್ಗೆ. ಯಾಕೆ ಅನ್ನುವದನ್ನು ಇಲ್ಲಿ ಜಾಸ್ತಿ ವಿವರಿಸಬೇಕಿಲ್ಲ..
ಹಾಯ್ಕು ಕೂಡ ಅಷ್ಟೇ!
ಹಾಗಾದರೆ ಸಮಸ್ಯೆ ಶುರುವಾಗಿದ್ದಾದರೂ ಎಲ್ಲಿ ?
ನಮಗೆಲ್ಲ ಪ್ರೈಮರಿಯಲ್ಲೇ ದ್ವಿಪದಿ,ತ್ರಿಪದಿ ಗೊತ್ತಾದವು. ದಿನಗಳೆದಂತೆಲ್ಲ ಸರ್ವಜ್ಞ,ಅಕ್ಕ,ಅಲ್ಲಮ, ಪಂಪ, ರನ್ನ, ಸಾನೆಟ್ಟು, ಷಟ್ಪದಿಗಳನ್ನು ಭೇಟಿಯಾಗುತ್ತ ಬಂದೆವು.ಆದರೆ ಈ ಹಾಯ್ಕು ಮಾತ್ರ ನಮಗೆ ಅಪರಿಚಿತವಾಗಿಯೇ ಉಳಿಯಿತು; ತನ್ಮೂಲಕ ಅದರೊಂದಿಗೆ ಒಂದು ಗುಪ್ತವ್ಯಾಮೋಹ ಬೆಳೆಯುತ್ತ ಬಂತು. ಪರಿಣಾಮವಾಗಿ,ಸಿಕ್ಕಸಿಕ್ಕಿದ್ದಕ್ಕೆಲ್ಲ “ಇದು ನೀನಾ,ಇದು ನೀನೇನಾ..?” ಅಂತ ಕೇಳಿಕೊಳ್ಳುವ ಅಪಾಯ ಕೂಡ ಹೆಚ್ಚುತ್ತ ಬಂತು.
ಬೇಸರದ ಸಂಗತಿ ಇಲ್ಲಿದೆ ನೋಡಿ: ಕುದುರೆ ‘L’ ಆಕಾರದಲ್ಲಿ ಚಲಿಸುತ್ತದೆ,ಒಂಟೆ ಕ್ರಾಸ್ ಆಗಿ ನಡೆಯುತ್ತದೆ,ಆದರೆ ಮಂತ್ರಿ ಮಾತ್ರ ದಾರಿಯಿದ್ದಲ್ಲಿ ಎಲ್ಲಿ ಬೇಕಾದರೂ,ಹೇಗೆ ಬೇಕಾದರೂ ನುಗ್ಗಬಲ್ಲ- ಅನ್ನುವ ನಿಯಮ ಗೊತ್ತಾಗದೇ ಹೋದರೆ ಚದುರಂಗದ ಆಟ ಆಡುವದಾದರೂ ಹೇಗೆ? ಇಲ್ಲಿನ ನಿಯಮ,ಹೋರಾಟದ ರಮ್ಯತೆ ಮತ್ತು ಸೋಲಿನ ಘನತೆ ನಮಗೆ ಅರಿವಾಗದೇ ಹೋದರೆ ಚೆಸ್ ಆಟದ ಸೌಂದರ್ಯವನ್ನು ನಾವು ಅನುಭವಿಸಲಾರೆವು.
ಹಾಯ್ಕು ಕೂಡ ಅಷ್ಟೇ.ಇಲ್ಲಿ ಕೆಲವೊಂದಿಷ್ಟು ನಿಯಮಗಳಿವೆ. ಹಲವಾರು ಮಜಲುಗಳಿವೆ.ಇಲ್ಲಿ,ನನ್ನ ಅರಿವಿಗೆ ಬಂದಷ್ಟು ಮತ್ತು ನನ್ನ ಅನುಭವಕ್ಕೆ ಸಿಕ್ಕಂಥ ಸಂಗತಿಗಳ ಬಗ್ಗೆ ಮಾತ್ರ ಚರ್ಚೆ ಮಾಡುತ್ತಿದ್ದೇನೆ.
ಹಾಯ್ಕುಗಳ ಗುಣಲಕ್ಷಣ :
ಹಾಯ್ಕು ಅನ್ನುವದು ತುಂಬ ಸಂಕೀರ್ಣವಾದ ಕಾವ್ಯಪ್ರಕಾರವೇನಲ್ಲ. ಅದೊಂದು ಜಾಪಾನಿ ಕಾವ್ಯ ಕಲೆ. ಥೇಟ್ ನಮ್ಮಲ್ಲಿನ ಸರ್ವಜ್ಞನ ವಚನಗಳ ಥರ:ಇಲ್ಲಿನ ತ್ರಿಪದಿಗಳ ಥರ. ಒಂದೇ ಒಂದು ಬದಲಾವಣೆಯೆಂದರೆ,ಇಡೀ ಹಾಯ್ಕುವಿನ format ಮತ್ತು concept ಒಂದು ಲೌಕಿಕ ಗಣೀತದ ಲೆಕ್ಕಾಚಾರ ಮತ್ತು ದೈವಿಕ ಮೋಹವೆಂಬ ಒಂದು ವಿಚಿತ್ರ ಬಂಧದಲ್ಲಿ ಬಂಧಿತವಾಗಿದೆ.
ಮೊದಲಿಗೆ,ಲೌಕಿಕ ಲೆಕ್ಕಾಚಾರದ ಬಗ್ಗೆ ಗಮನ ಹರಿಸುವ. ಹಾಯ್ಕು ಅಂದರೆ ಮೂರು ಸಾಲಿನ ಪದ್ಯ ಅಂತ ಹೇಳಿದೆನಷ್ಟೇ. ಇಲ್ಲಿ ಮೊದಲ ಸಾಲಿನಲ್ಲಿ ಐದು ಅಕ್ಷರಗಳು,ಎರಡನೇ ಸಾಲಿನಲ್ಲಿ ಏಳು ಅಕ್ಷರಗಳು ಹಾಗೂ ಮೂರನೇ ಸಾಲಿನಲ್ಲಿ ಮತ್ತೇ ಐದು ಅಕ್ಷರಗಳು ಕಾಣಿಸಿಕೊಳ್ಳುತ್ತವೆ. ಅಲ್ಲಿಗೆ,ಅದೊಂದು ಒಟ್ಟು ಹದಿನೇಳು ಅಕ್ಷರಗಳ ಕಾವ್ಯಮಾಲೆ.
ಎಲ್ಲ ಸರಳವಾಗಿದೆಯಲ್ಲ? ಇದರಲ್ಲೇನು ವಿಶೇಷ ಲೆಕ್ಕಾಚಾರ ಬಂತು ಅನ್ನುವಿರಾ? ಹೌದು,ಅದು ಕೇವಲ ಹದಿನೇಳು ಅಕ್ಷರಗಳ ಲೆಕ್ಕಾಚಾರವಲ್ಲ. ಅದು ಹದಿನೇಳು syllableಗಳ ಲೆಕ್ಕಾಚಾರ. ಹಾಯ್ಕುಗಳಲ್ಲಿ ಸಿಲೇಬಲ್ (ಅಂದರೆ,ಪದಗಳ ಉಚ್ಚಾರಣೆ) ತುಂಬ ಮುಖ್ಯ. ಜಾಪಾನಿಗಳು ಹಾಯ್ಕುಗಳಲ್ಲಿ ಈ ಹದಿನೇಳು ಉಚ್ಚಾರಣೆಗಳು ಮಾತ್ರ ಬರುವ ಹಾಗೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಬಹುಶಃ ಜಾಪಾನಿ ಭಾಷೆ ತುಂಬ phonetic ಸೌಲಭ್ಯ ಹೊಂದಿರುವ ಭಾಷೆ. ಅವರ ಅಕ್ಷರಗಳು ಹದಿನೇಳಕ್ಕಿಂತ ಜಾಸ್ತಿಯಾದರೂ ಕೂಡ ಉಚ್ಚಾರ ಮಾತ್ರ ಹದಿನೇಳಕ್ಕೇ ಸೀಮಿತಗೊಳಿಸುವಂಥ ಸೌಲಭ್ಯ ಅಲ್ಲಿನ ಲಿಪಿ ಗಳಿಸಿಕೊಂಡಿರಬಹುದು. ಆದರೆ ನಮ್ಮ ಕನ್ನಡ ಭಾಷೆಯ ಸೊಗಸು ಬೇರೆ. ಇಲ್ಲಿ ಯಾವುದೇ ಸೈಲೆಂಟ್ ಅಕ್ಷರಗಳಿಲ್ಲ. ಏನು ಬರೆಯಬಲ್ಲೆವೊ,ಅದನ್ನು ಸ್ಪಷ್ಟವಾಗಿ ಉಚ್ಚರಿಸಬಲ್ಲೆವು. ಹೀಗಾಗಿ ಕನ್ನಡದಲ್ಲಿ ಸರಿಯಾಗಿ ಹದಿನೇಳು ಅಕ್ಷರಗಳನ್ನು ತುಂಬಿ ಹಾಯ್ಕುವೊಂದನ್ನು ಹೆಣೆಯುವದು ತುಂಬ ಸವಾಲಿನ ಕೆಲಸ. ಇದೇ ಕಾರಣಕ್ಕಾಗಿಯೇ ಬಹಳಷ್ಟು ಸಲ,ಓದುಗರಿಗೆ ಕನ್ನಡದ ಹಾಯ್ಕು ಕಬ್ಬಿಣದ ಕಡಲೆಯಾಗುವದೂ ಉಂಟು. ಹಾಗಾಗಿಯೇ ಸದ್ಯದ ತುರ್ತಿಗೆ ಅಂತ ಈ ಹದಿನೇಳರ ಜಂಜಾಟ ಬಿಟ್ಟುಕೊಟ್ಟು ಹಾಯ್ಕುಗಳ ಇನ್ನಿತರ ಒಳನೋಟಗಳನ್ನು ಬಳಸಿಕೊಂಡು ಈ ಬರಹದ ಮುಂದಿನ ಭಾಗಗಳಲ್ಲಿ ಹಾಯ್ಕುಗಳನ್ನು ಉದಾಹರಣೆಗಳಂತೆ ಬಳಸಿಕೊಂಡಿದ್ದೇನೆ.
ಇರಲಿ,ಇಲ್ಲಿ ಈ ಸಿಲೇಬಲ್ ಗಳ ಲೆಕ್ಕಾಚಾರ ಹ್ಯಾಗೆ ಮಾಡುತ್ತಾರೆ ಅನ್ನುವದನ್ನು ಗಮನಿಸುವ.
ಇಂಗ್ಲೀಷಿನಲ್ಲಿ love ಅನ್ನುವದು ನಾಲ್ಕು ಅಕ್ಷರಗಳನ್ನು ಹೊಂದಿದೆ.ಕನ್ನಡದಲ್ಲಿ ಎರಡು (ಲವ್) ಅಕ್ಷರಗಳನ್ನು ಹೊಂದಿದೆ.ಆದರೆ ಇದನ್ನು ಉಚ್ಚರಿಸುವಾಗ ನಾವು “ಲೌ” ಅನ್ನುತ್ತೇವೆ. ಹೀಗಾಗಿ ಲೆಕ್ಕಾಚಾರದಲ್ಲಿ ಇದು ಒಂದು ಸಿಲೇಬಲ್ ಅಥವಾ ಒಂದೇ ಅಕ್ಷರ ಅಂತಲೇ ಗಣನೆಗೆ ತೆಗೆದುಕೊಳ್ಳಬೇಕು. ಅದೇ ರೀತಿ “ಕಣ್” ಅನ್ನುವದನ್ನೂ ಒಂದೇ ಸಿಲೇಬಲ್ ಅಂತ ಲೆಕ್ಕ ಮಾಡಬೇಕು. ಹಾಗೊಂದು ವೇಳೆ “ಕಣ್ಣು” ಅಂತ ಬಳಸಿದ್ದರೆ,ಅದು ಎರಡು ಸಿಲೇಬಲ್ ಅಂತ ಲೆಕ್ಕಕ್ಕೆ ಬರುತ್ತದೆ. ಹಾಗೆಯೇ “ಬಂಪರ್” ಕೂಡ ಎರಡು ಸಿಲೇಬಲ್. ‘ಬಂಪರು’ ಅಂತ ನೀವು ಬಳಸಿದರೆ ಅದು ಮೂರು ಸಿಲೇಬಲ್. ಇನ್ನು ದೀರ್ಘ,ಚಿನ್ನೆಗಳು ಮತ್ತು ಅನುಸ್ವಾರ ಅಥವಾ ಒತ್ತಕ್ಷರಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ.
ಹೀಗೆ ಲೆಕ್ಕ ಮಾಡಿದ ಮೇಲೆ ನಮ್ಮ ಹಾಯ್ಕು ಒಂದು ಅಂದಾಜಿನಂತೆ ಕೆಳಗಿನ ಫಾರ್ಮ್ಯಾಟ್ ಹೊಂದಿರುತ್ತದೆ.
ಸರಿಗಮಪ (5)
ಸಾರೇಗಾ ಮಪದ ನೀ (7)
ಸರಿಗ ಮಪ (5)
ಇದೇ ರೀತಿಯಲ್ಲಿ ಒಂದು ಸರಳ ಪದ್ಯ ಬರೆಯುವದಾದರೆ,
ಹಾಯ್ಕು ಗೊತ್ತಿಲ್ಲ, (5)
ಆದರೂ ಬರೀತೇನೆ- (7)
ಉಳೀಬೇಕಲ್ಲ? (5)
ಹೀಗಂತ ಬರೆದರೆ ಅದನ್ನು ಹಾಯ್ಕು ಅನ್ನಬಹುದೇ?
ಇಲ್ಲ,ಮೇಲಿರುವದನ್ನು ಹಾಯ್ಕು ಅನ್ನಲಾಗದು.ಬೇಕಾದರೆ ಅದನ್ನು ಹಾಯ್ಕುವಿನ ಫಾರ್ಮ್ಯಾಟ್ ಹೊಂದಿರುವ ಹನಿಗವನ,ಮಿನಿಗವನ ಅಥವಾ ಚುಟುಕು ಅಂತೇನಾದರೂ ಹೆಸರಿಸಬಹುದು.ಹಾಗಾದರೆ,ಎಂಥವುಗಳನ್ನು ಹಾಯ್ಕು ಅನ್ನಬಹುದು..?
Rule No 1:
ಚಿಟ್ಟೆ,ಸೂರ್ಯ,ಚಂದ್ರ,ಮಂಜು,ಬೆಟ್ಟ,ಹೊಲ,ಹೊಂಡ,ಬೆಳದಿಂಗಳು,ರಾತ್ರಿ,ಮಿಂಚು,ಮಳೆ ಯಾಕೆ ಪದೇ ಪದೇ ಹಾಯ್ಕುಗಳಲ್ಲಿ ಕಾಣಿಸಿಕೊಳ್ಳುತ್ತವೆ ಅಂತ ನಿಮಗೆ ಅನಿಸಿರಬಹುದು. ಹೌದು,
ಹಾಯ್ಕುವಿನ ಮೊದಲ ನಿಯಮವೆಂದರೆ,ನಿಸರ್ಗದಲ್ಲಿ ನಡೆಯುವ ಘಟನೆ ಅಥವಾ ಬೆಳವಣಿಗೆಗಳನ್ನು ಒಂದು ಮೋಹಕ ಬೆರಗಿನಿಂದ ದಾಖಲಿಸುವದು. ಇನ್ನೂ ಸ್ಪಷ್ಟವಾಗಿ ಹೇಳಬಹುದಾದರೆ,ಸೃಷ್ಟಿಯ ಈ ಬೆಳವಣಿಗೆ ಅಥವಾ ಘಟನೆಗಳಲ್ಲಿ ನಿಮ್ಮ ಪಾತ್ರ ಇರಕೂಡದು. ಅದು ಹೊರಗಿನ ಯಾವುದೇ external force ಇಲ್ಲದೇ ಸ್ವಯಂಪ್ರೇರಿತವಾಗಿ ನಡೆಯುವ ಬೆಳವಣಿಗೆ ಆಗಿರಬೇಕು. ಒಬ್ಬ ಹಾಯ್ಕು ಕವಿ ಇಂಥ ಘಟನೆಗಳನ್ನು ದೂರ ನಿಂತು ಅದನ್ನೆಲ್ಲ ದಾಖಲಿಸುವ ಪ್ರಯತ್ನ ಮಾಡುತ್ತಾನೆಯೇ ಹೊರತು,ತಾನೇ ಸದರಿ ಘಟನೆಯ ವರ್ತುಲದೊಳಗೆ ನಿಂತುಕೊಳ್ಳಬಯಸುವದಿಲ್ಲ ಅಥವಾ ಇಡೀ ಘಟನೆಯ ಭಾಗವಾಗಲು ಇಷ್ಟಪಡುವದಿಲ್ಲ.
ಜಾಪಾನಿನ ಹಾಯ್ಕುಮಾಸ್ಟರ್ ಮಾತ್ಸೋ ಬಾಶೋ ಬಿಡಿಸಿದ ಹಾಯ್ಕು ಇಲ್ಲಿದೆ:
ಆವತ್ತೊಂದು ದಿನ,ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ನಾನೂ ಪ್ರಯತ್ನಿಸಿದಾಗ ನನಗೆ ಹೊಳೆದಿದ್ದು:
ನೀರಿಗೆಂದು ಬಂದ
ನಾರಿಯರು
ಚಂದಿರನಿಗೆ ಮೋಹಿತರು;
ಇಲ್ಲೀಗ
ನೂರು ಕೊಡಗಳಲ್ಲೂ
ನೂರು ಚಂದಿರ.
ಇಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ: ಒಬ್ಬ ಹಾಯ್ಕು ಕವಿ ಇಂಥ ನಿಸರ್ಗದ ಬೆಳವಣಿಗೆಗಳಿಗೆ ಪ್ರೇರಕ(catalyst)ಶಕ್ತಿ ಅಥವಾ ತಡೆಗೋಡೆ(preventer)ಯಾಗದೇ ತಟಸ್ಥ ಅಂತರದಲ್ಲಿ ನಿಂತು ದಾಖಲಿಸುವ ಪ್ರಯತ್ನ ಮಾಡುತ್ತಾನೆಯೇ ಹೊರತು,ತಾನೇ ಸದರಿ ಘಟನೆಯ ವರ್ತುಲದೊಳಗೆ ನಿಂತುಕೊಳ್ಳಬಯಸುವದಿಲ್ಲ ಅಥವಾ ಇಡೀ ಘಟನೆಯ ಭಾಗವಾಗಲು ಇಷ್ಟಪಡುವದಿಲ್ಲ.

Rule No 2 :
ಹಾಯ್ಕುಗಳ ಬಹುಮುಖ್ಯ ಗುಣವೆಂದರೆ,ಅದೊಂದು ಬರೀ ಕವಿತೆಯಾಗದೇ ಒಂದು ಸ್ತಬ್ದಚಿತ್ರವಾಗಿರುವದು.
ಅಂದರೆ,ನೈಸರ್ಗಿಕ ಘಟನೆಗಳನ್ನು ಗಮನಿಸುತ್ತಿರುವಾಗ ಯಾವುದೋ ಒಂದು ಹಂತದಲ್ಲಿ ಘಟಿಸಿಬಿಡುವ ಕ್ಷಣಭಂಗುರದ ಬೆಳವಣಿಗೆಯನ್ನು ಚಿತ್ರಪಟದಲ್ಲಿ ಬಂಧಿಸುವ ಕಲೆ.
ಸರಳವಾಗಿ ಹೇಳಬಹುದಾದರೆ,ತಂದೆಯೊಬ್ಬ ತನ್ನ ಪುಟ್ಟ ಕಂದನನ್ನು ಮೇಲಕ್ಕೆ ಎತ್ತಿ ಎತ್ತಿ ಆಡಿಸುತ್ತಿದ್ದಾನೆ. ಮೊದಲಸಲ ತನ್ನ ಅಪ್ಪನ ಕೈಗಳಿಂದ ಗಾಳಿಗೆ ಹಾರುವ ಮಗು ತಾನು ಸುರಕ್ಷಿತ ವಲಯದಿಂದ ಬೇರ್ಪಟ್ಟಿದ್ದಕ್ಕಾಗಿ ಗೊಂದಲಕ್ಕೀಡಾಗುತ್ತದೆ. ಎರಡನೇ ಸಲ ಹಾರಿದಾಗ ಗಾಬರಿಯಾಗಲೂಬಹುದು. ಆದರೆ ಮೂರನೇ ಸಲಕ್ಕೆ ಹಾರಿದಾಗ,ತನ್ನಪ್ಪ ತನ್ನನ್ನು ಕೆಳಕ್ಕೆ ಬೀಳಿಸಲಾರ ಅನ್ನುವ ನಂಬಿಕೆಯೊಂದಿಗೆ ಗಾಳಿಯಲ್ಲೇ ಅದು ನಗು ಬೀರುತ್ತದೆ. ಹಾಗೆ ಗಾಳಿಯಲ್ಲಿ ಹಿತಾನುಭವ ಅನುಭವಿಸುತ್ತಲೇ ಒಂದು ನಂಬಿಕೆಯ ನಗು ಹೊರಡಿಸುವ ಕ್ಷಣ- ಆ ಒಂದು ಕ್ಲಿಕ್ – ಹಾಯ್ಕುವಿಗೆ ಜನ್ಮ ನೀಡುತ್ತದೆ!
ಇಲ್ಲಿ,ತಂದೆಯೊಬ್ಬ ಅಳುತ್ತಿರುವ ತನ್ನ ಮಗುವನ್ನು ಎತ್ತಿ ಆಡಿಸಿದ್ದು,ಅದು ಗಾಬರಿಯಾಗಿದ್ದು,ಅಳು ನಿಂತಿದ್ದು- ಇವೆಲ್ಲವನ್ನೂ ಒಟ್ಟಾಗಿ ಸೆರೆ ಹಿಡಿದರೆ ಅದು ಕವಿತೆ. ಆದರೆ ಮಗುವಿನ ನಗುವ ಕ್ಷಣವನ್ನು ಚಿತ್ರಿಸಿದರೆ ಅದು ಹಾಯ್ಕು.
ಹೀಗೆ ಒಂದು ಕ್ಷಣದ ಘಟನೆಯನ್ನು ಹೇಗೆ ಹಾಯ್ಕುಗಳಲ್ಲಿ ಸೆರೆ ಹಿಡಿಯುವದು?ಇದನ್ನು ಒಂದು pictorial example ಮೂಲಕ ತೋರಿಸಬಹುದೆ? ಅಂತ ಯೋಚಿಸಿದಾಗ ಕೆಳಗಿನ ಚಿತ್ರ ಕಣ್ಣೆದುರಿಗೆ ಬಂತು.
ಇಲ್ಲಿ ನೋಡಿ: ಈ ಪಕ್ಷಿಗಳು ಎಲ್ಲಿಂದಲೋ ಬಂದವುಗಳು. ಮತ್ತು ಎಲ್ಲಿಗೋ ಹೊರಟಿವೆ. ಅವೆಲ್ಲ ಎಲ್ಲಿಂದ ಬಂದವು,ಯಾಕೆ ಬಂದವು ಮತ್ತು ಎಲ್ಲಿಗೆ ಹೊರಟಿವೆ ಅಂತ ಕಲ್ಪನೆ ಮಾಡಿಕೊಂಡರೆ ಅದು ಕವನವಾದೀತು. ಪಟ್ಟಾಗಿ ಕುಳಿತು ಅಭ್ಯಸಿಸಿದರೆ ಹಕ್ಕಿಗಳ ಬಗ್ಗೆ ಅದೊಂದು ಸ್ಟಡಿ ಮೆಟೀರಿಯಲ್ ಆದೀತು. ಆದರೆ ಇಲ್ಲಿ ಅವು ಆಕಾಶದಲ್ಲಿ ಹಾರಾಡುತ್ತಿರುವಾಗ ಯಾವುದೋ ಒಂದು ಕ್ಷಣದಲ್ಲಿ,ಯಾವುದೋ ಒಂದು ಕೋನದಲ್ಲಿ ತಮಗರಿವಿಲ್ಲದೇ ಒಂದು ಭಾವವನ್ನು ಮೂಡಿಸಿಬಿಟ್ಟಿವೆ. ಹಾಗೆ ಮೂಡಿಸಿದ ಭಾವ ಯಾವುದೆಂದು ಕೂಡ ಅವುಗಳಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅದೊಂದು ನಗುವಿನ ಭಾವ ಅಂತ ಹಾಯ್ಕು ಕವಿಗೆ ಗೊತ್ತಾಗಿದೆ. ಮತ್ತು ಆತ ಸರಿಯಾಗಿ ಅದೊಂದೇ ಕ್ಷಣವನ್ನು ತನ್ನ ಹಾಯ್ಕುಗಳಲ್ಲಿ ಒಂದು ಬೆರಗಿನ ಮೂಲಕ ಚಿತ್ರಿಸುತ್ತಾನೆ.
ಹಾಗೆ ಮೂಡಿದ ಕ್ಷಣಗಳು ಯಾವುದ್ಯಾವುದು ಅಂತ ಯೋಚಿಸಿದಾಗ ಬಾಶೋ ಮತ್ತೇ ನೆನಪಿಗೆ ಬಂದ:
ಇಲ್ಲಿ ನೋಡಿರಿ:ಇಲ್ಲಿ ಬಾಶೋ ಹೊಂಡವೊಂದರಲ್ಲಿ ನಡೆಯುವ ಘಟನೆಗಳನ್ನು ಗಮನಿಸುತ್ತಿದ್ದಾನೆ. ಇದೊಂದು ಶಾಂತ ಹೊಂಡ. ತಿಳಿನೀರಿನಲ್ಲಿ ಆಗಸದ ಚಂದ್ರ ಸ್ಪಷ್ಟವಾಗಿ ಬಿಂಬಿತಗೊಂಡಿದ್ದಾನೆ. ಅಂಥ ಸಮಯದಲ್ಲಿ ಅಚಾನಕ್ಕಾಗಿ ಕಪ್ಪೆಯೊಂದು ನೀರಿಗೆ ನೆಗೆದಿದೆ. ಸರಿಯಾಗಿ ಚಂದ್ರನ ಪ್ರತಿಬಿಂಬದ ಮೇಲೆಯೇ ಜಿಗಿದಿದೆ ಮತ್ತು ನೀರಿನಾಳಕ್ಕೆ ಹೊರಟು ಹೋಗಿದೆ. ಇದೊಂದು ನಿಸರ್ಗದಲ್ಲಿ ನಡೆಯಬಹುದಾದ ಸಹಜಾತಿಸಹಜ ಕ್ರಿಯೆ. ನಮ್ಮಂಥವರು ಗಮನಕೊಡದಿರುವಂಥ ಚಟುವಟಿಕೆ. ಆದರೆ ಈ ಇಡೀ ಘಟನೆಯನ್ನು ಹಾಯ್ಕು ಮಾಸ್ಟರ್ ಬಾಶೋ ಚಿತ್ರಿಸುವ ಪರಿ ನೋಡಿ:
ಹಾಗೆಯೇ,ಇನ್ನೊಬ್ಬ ಹಾಯ್ಕು ಮಾಸ್ಟರ್ ಮಸಯೋಕಾ ಶಿಕಿ ಬರೆದ ಹಾಯ್ಕು ಗಮನಿಸುವದಾದರೆ,
ಅದೇ ರೀತಿ ನಾನೂ ಪ್ರಯತ್ನಿಸಿದೆ: ಇಲ್ಲೊಂದು ಖಗ್ರಾಸ ಸೂರ್ಯಗ್ರಹಣ ನಡೆಯುತ್ತಲಿದೆ.ನಾನು ನಿಂತಿರುವ ಹೊಲದಲ್ಲಿ ಸೂರ್ಯಕಾಂತಿಯ ಬೆಳೆಯಿದೆ. ಈ ಸೂರ್ಯಕಾಂತಿ ಹೂವು ಯಾವಾಗಲೂ ಸೂರ್ಯನತ್ತ ಮುಖ ಮಾಡುತ್ತದೆ ಅಂತ ನಮಗೆಲ್ಲರಿಗೂ ಗೊತ್ತು.ಯಾಕೆಂದರೆ ಸೂರ್ಯನ ಬೆಳಕೇ ಅದರ ಆಹಾರ. ಅದು ಸೃಷ್ಟಿ ನಿಯಮವಿರಲಿಕ್ಕೂ ಸಾಕು. ಆದರೆ ಸೂರ್ಯಗ್ರಹಣದ ಯಾವುದೋ ಒಂದು ಹಂತದಲ್ಲಿ ಸುತ್ತಲೂ ಕತ್ತಲು ಕವಿದಿರುವಾಗ ಒಂದು ಸೂರ್ಯಕಾಂತಿಯ ಹೂವನ್ನು ಅದ್ಯಾರೋ ಯಾವುದೋ ದಿಕ್ಕಿಗೆ ಬಾಗಿಸಿಬಿಟ್ಟಿದ್ದಾರೆ. ಇಂಥ ನೋಟವನ್ನು ನೋಡಿದಾಗ ನನಗೆ ಕಂಡ ನೋಟ ಕೆಳಗಿದೆ:
ಖಗ್ರಾಸ ಸೂರ್ಯಗ್ರಹಣ.
ನೂರಾರು
ಸಖಿಯರ ಮಧ್ಯೆ
ಸೂರ್ಯಕಾಂತಿಯೊಂದು
ದಿಕ್ಕುತಪ್ಪಿ
ಕಳವಳಗೊಂಡಿದೆ..
ಹೀಗೆ ಘಟನೆಯೊಂದರ ತಾತ್ಕಾಲಿಕ ಕ್ಷಣವೊಂದನ್ನು ಮಾನವೀಯ ಗುಣದೊಂದಿಗೆ ಒಂದು ಚೌಕಟ್ಟಿನಲ್ಲಿ ಚಿತ್ರಿಸುವದರ ಮೂಲಕ ಹಾಯ್ಕುಗಳನ್ನು ಕಟ್ಟಬಹುದು. ಈ ನಿಯಮದ ಬಗ್ಗೆ ಒಟ್ಟಾರೆಯಾಗಿ ಹೇಳುವದಾದರೆ: Experience the moment, Freeze it, Get mesmerised yourself, Extend it and show it to them; but NOT to explain..!
Rule No 3 :
ನಾನು ಆಗಲೇ ವಿವರಿಸಿದಂತೆ,ಹಾಯ್ಕು ಕವಿಯೊಬ್ಬ ಪ್ರಕೃತಿಯಲ್ಲಿನ ಅಸಂಖ್ಯಾತ ಬೆಳವಣಿಗೆಗಳಲ್ಲಿ ಒಂದು ‘ನೋಟ’ವನ್ನು ಗಮನಿಸುತ್ತಲೇ ಇರುತ್ತಾನೆ. ಅದು ಮಾನವೀಯ ನೋಟ ಇರಬಹುದು,ಪ್ರೀತಿಯ ನೋಟ ಇರಬಹುದು,ಬೆರಗಿನ ನೋಟ ಇರಬಹುದು,ಅಥವಾ ಕುತೂಹಲದ ನೋಟ ಇರಲಿಕ್ಕೂ ಸಾಕು. ಆದರೆ ಎಲ್ಲದರಲ್ಲೂ ಒಂದು ಅಗೋಚರವಾದ divine ಸ್ಪರ್ಶವಿದ್ದೇ ಇರುತ್ತದೆ. ಹಾಗಾಗಿ ಅದು ಬರೀ ನೋಟವಲ್ಲ;ಅದೊಂದು ಕಾಣ್ಕೆ!
ಬೇಂದ್ರೆಯವರಿಗೆ ಕಂಡಿದ್ದೂ ಇದೇ ಕಾಣ್ಕೆ. ಬಹುಶಃ ‘ಬೆಳಗು’ ಎಂಬುದನ್ನು ಅವರು ಬರೀ ನೋಟದಲ್ಲಿ ಸೆರೆ ಹಿಡಿದಿದ್ದರೆ ಅವರು ಇನ್ನೇನೋ ಚಿತ್ರಿಸುತ್ತಿದ್ದರು. ಆದರೆ ಬೆಳಗಿನಲ್ಲಿ ಅವರು ಕಂಡಿದ್ದು ಕಾಣ್ಕೆ. ಹೀಗಾಗಿ,ಅದಕ್ಕವರು “ಇದು ಬರೀ ಬೆಳಗಲ್ಲೋ ಅಣ್ಣಾ..” ಅಂದರು..
ಇರಲಿ,ಮೂರನೇ ನಿಯಮಕ್ಕೆ ಬರುವದಾದರೆ,ಯಾವುದೇ ಹಾಯ್ಕುಕವಿ ತನ್ನ ಹಾಯ್ಕುಗಳಲ್ಲಿ ಬರೀ ತಾನು ಕಂಡ ಕಾಣ್ಕೆಯನ್ನಷ್ಟೇ ಚಿತ್ರಿಸುವದಿಲ್ಲ. ಬದಲಿಗೆ ಸದರಿ ಕಾಣ್ಕೆಯನ್ನು ಒಂದು ರೂಪಕ ಅಥವಾ ಇನ್ನೊಂದು elementನೊಂದಿಗೆ ಜೋಡಿಸುವದರ ಮೂಲಕವೋ ಅಥವಾ ಹೋಲಿಸುವದರ ಮೂಲಕವೋ- ಆ ಇಡೀ ಘಟನೆಯನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯುತ್ತಾನೆ.
ಮತ್ತು ಆ ಮೂಲಕ ಇಡೀ ಹಾಯ್ಕುವನ್ನು ಹೊಸ ಎತ್ತರಕ್ಕೆ ಜಿಗಿಸುತ್ತಾನೆ..
ಜಾಪಾನಿನ ಮತ್ತೊಬ್ಬ ಹಾಯ್ಕು ಮಾಸ್ಟರ್ ಯೋಸಾ ಬೂಸಾನ್ ತನ್ನ ಹಾಯ್ಕುಗಳಲ್ಲಿ ಕಂಡಿದ್ದು ಇಲ್ಲಿದೆ ನೋಡಿ:
ಬಾಶೋನ ಇನ್ನೊಂದು ಉದಾಹರಣೆ:
ಆಹ್ ,ಎಂಥ ಸಂಜೆಯಿದು!
ಮಂದಿರದ ಗಂಟೆಗಳು
ನಿಶ್ಚಲವಾದಂತೆಲ್ಲ
ತೋಟದ ಹೂಗಳ
ಪರಿಮಳಕ್ಕೆ
ನವಚೇತನ ಬಂದಂತಿದೆ..
ಇಲ್ಲೊಬ್ಬ ಪೋರ ಕಾಡಿನ ಹಾದಿಯಲ್ಲಿ ಮನೆಗೆ ಹಿಂತಿರುಗಬೇಕಿದೆ. ಅಮಾವಾಸ್ಯೆಯ ರಾತ್ರಿ ಬೇರೆ.ದಾರಿ ಸವೆಯುತ್ತಿರುವಾಗ ಒಬ್ಬಂಟಿ ಹುಡುಗನ ಭಯದ ಮನದಲ್ಲಿ ಹೆಜ್ಜೆಹೆಜ್ಜೆಗೂ ವಿಘ್ನಗಳು ಎದುರಾಗುತ್ತಿವೆ. ಅಸಲಿಗೆ ಅಲ್ಲಿ ಏನೂ ಅಪಾಯ ಇಲ್ಲದಿರಬಹುದು. ಅಪಾಯ ಆತನ ಮನದಲ್ಲೇ ಮನೆಮಾಡಿರಬಹುದು. ಇಂಥ ಸಮಯದಲ್ಲಿ ಈ ಪೋರ ಆ ಕಾಡಿನ ದಾರಿಯನ್ನು ಹೇಗೆ ಕ್ರಮಿಸಿರಬಹುದು ಅಂತ ಯೋಚಿಸಿ,ಹಾಯ್ಕುವಿನ 5-7-5 ಫಾರ್ಮ್ಯಾಟ್ ನಲ್ಲೇ ಹಾಯ್ಕು ಬರೆಯುವ ಪ್ರಯತ್ನ ಮಾಡಿದೆ:
ಕತ್ತಲ ಹಾದಿ.
ಪೋರನಿಗೆ ಹಾಡೊಂದೇ
ಆಪತ್ಬಾಂಧವ!
ಹೀಗೆ ಹಾಯ್ಕುಗಳ ಕುರಿತಂತೆ ಸಾಂಪ್ರದಾಯಿಕ ನಿಯಮಗಳ ಜೊತೆಜೊತೆಗೇ ಯಾವುದನ್ನೂ ವರ್ಣಿಸದಿರು,ಆದಷ್ಟು ಗುಣವಾಚಕಗಳನ್ನು ಬಳಸದಿರು,ಸಹಜವಾಗಿರು,ಸರಳವಾಗಿರು ಅನ್ನುವ ನಿಯಮಗಳೂ ಇವೆ. ಹಾಗೆಯೇ ಹಾಯ್ಕುಗಳನ್ನು ಬದಲಾಗುವ ಋತುಮಾನಗಳ ಆಧಾರದ ಮೇಲೆಯೂ ಕಟ್ಟಲಾಗುತ್ತದೆ.ಅಂದರೆ ಬೇಸಿಗೆ,ಮಳೆ,ಚಳಿಗಾಲದ ಆಯಾ ಸಮಯದಲ್ಲಿ ಉಂಟಾಗುವ ನಿಸರ್ಗದ ಬೆಳವಣಿಗೆಗಳನ್ನು ಹಾಯ್ಕುಗಳಲ್ಲಿ ಸೆರೆಹಿಡಿಯುವದು..
ಉಪಸಂಹಾರ:
ದಯವಿಟ್ಟು ಗಮನಿಸಿ.
ಮೇಲೆ ಹೇಳಿದ ಅಷ್ಟೂ ನಿಯಮಗಳು ವಿಶ್ವವ್ಯಾಪಿ ಆಗಿರುವಂಥವು. ಮತ್ತು ವಿಶ್ವವ್ಯಾಪಿ ಒಪ್ಪಿಕೊಂಡಿರುವಂಥವು. ಈಗ ನಾನು ಹೇಳುತ್ತಿರುವದು ನನ್ನ ಅನುಭವಕ್ಕೆ,ನನ್ನ ಅರಿವಿಗೆ ಬಂದಿರುವಂಥದ್ದು. ಇದನ್ನು ಎಲ್ಲರೂ ಒಪ್ಪಬೇಕೆಂಬ,ಪಾಲಿಸಬೇಕೆಂಬ ಹಠ ನನಗಿಲ್ಲ. ಆದರೆ ಜಗತ್ತಿನಲ್ಲಿ ಎಲ್ಲರೂ ಹಾಯ್ಕುಗಳನ್ನು ಓದುವ,ಕಟ್ಟುವ ಜನಾಂಗದವರಾದರೆ ಎಷ್ಟು ಚೆಂದ ಅನ್ನುವ “ರೇ..” ಆಸೆ ಖಂಡಿತ ಇದೆ.
ಹಾಯ್ಕುಗಳ ಬಗ್ಗೆ ನನಗೆ ಒಂಚೂರೂ ಗೊತ್ತಿಲ್ಲದಂಥ ಸಮಯದಲ್ಲಿ,ನಾನು ಸಿಕ್ಕಸಿಕ್ಕ ಕವಿತೆಗಳಿಗೆಲ್ಲ ಹಾಯ್ಕು ಅಂತೆಲ್ಲ ಆರೋಪಿಸಿದ್ದಿದೆ. ಚೂರು ಗೊತ್ತಾದ ಮೇಲೆ,ಇದೆಲ್ಲ ಎಷ್ಟು ಸರಳ ಅಂತ ಅಂದುಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ “ಇದು ಹಾಯ್ಕು ಅಲ್ಲ..” ಅಂತಲೂ ಅನಿಸಿದೆ. ಹಾಗಾಗಿ ಹಾಯ್ಕು ಬರೆಯುವದು ಎಷ್ಟು ಸುಲಭವೋ,ಅಷ್ಟೇ ಕ್ಲಿಷ್ಟಕರವೂ ಹೌದು ಅಂತ ಮಾತ್ರ ಹೇಳಬಲ್ಲೆ.
ಆದರೆ,ಒಂದಂತೂ ನಿಜ. ಜಗತ್ತಿನ ಎಲ್ಲ ಕತೆಗಳು,ಕವಿತೆಗಳು invented ಆಗಿದ್ದರೆ,ಹಾಯ್ಕು ಅನ್ನುವದು discovered! ಯಾಕೆಂದರೆ,ಹಾಯ್ಕುಗಳನ್ನು ಹೊಸದಾಗಿ ಸೃಷ್ಟಿಸಲಾಗದು. ಅದು ನಮ್ಮ ಸುತ್ತಮುತ್ತಲಲ್ಲೇ ಇರುವಂಥದ್ದು,ಕಾಣುವಂಥದ್ದು. ಹಾಗಾಗಿ ಅದು ಬಹಳ ಸರಳವಾಗಿ access ಆಗುವಂಥದ್ದು. ಆದರೆ ಹಾಗೆ ಅದು ತನ್ನನ್ನು ತಾನು ಗೋಚರಿಸಿಕೊಳ್ಳಲು ಎದುರಿಗಿರುವ ವ್ಯಕ್ತಿಯಲ್ಲಿ ವಿವರಿಸಲಾಗದ ಒಂದು ಮನೋಸ್ಥಿತಿಯನ್ನು ಬೇಡುತ್ತದೆ. ನನ್ನನ್ನು ಕಾಣಬೇಕೆಂದರೆ ಮೊದಲು ಪ್ರೀತಿಸುವದನ್ನು ಕಲಿ ಅಂತ ಹೇಳುತ್ತದೆ. ನಾನೇನಾದರೂ ಋಣಾತ್ಮಕ ಮನೋಭಾವದ ವ್ಯಕ್ತಿಯಾಗಿದ್ದರೆ ಹಾಯ್ಕು ಖಂಡಿತವಾಗಿಯೂ ನನಗೆ ಕಾಣಿಸದು. ಯಾಕೆಂದರೆ,ಈ ಲೋಕದ ಯಾವುದೇ ಹಾಯ್ಕು ನೋವು,ಗಾಯ,ವ್ಯಂಗ್ಯ,ರಕ್ತ ಮತ್ತು ಅಂಧಕಾರಗಳನ್ನು ಬಿಂಬಿಸುವದಿಲ್ಲ. ಹಾಗೇನಾದರೂ ಅದು ಇವೆಲ್ಲವನ್ನೂ ಪ್ರತಿನಿಧಿಸಿದ್ದೇ ಆದಲ್ಲಿ ಅದು ಹಾಯ್ಕು ಅಲ್ಲವೇ ಅಲ್ಲ. ನನ್ನ ಅನಿಸಿಕೆಯಂತೆ,ಹಾಯ್ಕುವೊಂದು ತ್ರಿಕೋಣಾಕಾರದ ಬಿಂದುಗಳ ಮೇಲೆ ನಿಂತಿದೆ. ಮನುಷ್ಯನ ಅರಿವು,ಮನಸ್ಸು ಮತ್ತು ಸಮಯ-ಇವುಗಳೇ ಈ ತ್ರಿಕೋಣದ ಆಧಾರ ಬಿಂದುಗಳು. ಈ ಬಿಂದುಗಳನ್ನು ಒಂದು ಸರಳರೇಖೆಯಲ್ಲಿ synchronise ಮಾಡಬಲ್ಲೆ ಅನ್ನುವದಾದರೆ ಬಹುಶಃ ಹಾಯ್ಕುಗಳಲ್ಲಿರುವ ಒಳನೋಟ ನಮಗೆ ದಕ್ಕುವ ದಿನಗಳು ದೂರವಿಲ್ಲ.
ಹಾಯ್ಕು ಅನ್ನುವದು ಕಲೆಯಲ್ಲ;ಅದೊಂದು ಅನುಸಂಧಾನ.ಖಂಡಿತ ನಾನು ಉತ್ಪ್ರೇಕ್ಷೆ ಮಾಡುತ್ತಿಲ್ಲ:ನಾವು ಉಳಿದ ಸಮಯದಲ್ಲಿ ಇನ್ನೇನೋ ಆಗಿರಬಹುದು,ಆದರೆ at least,ಹಾಯ್ಕು ನೋಡುವ/ಕಟ್ಟುವ ಸಮಯದಲ್ಲಿ ಅದು ಬಯಸುವ ಮನೋಸ್ಥಿತಿಯನ್ನು ತಂದುಕೊಳ್ಳದಿದ್ದರೆ ಹಾಯ್ಕು ನಮಗೆ ಸಿಗದು. ಹಾಗೆಯೇ ಉತ್ಪ್ರೇಕ್ಷೆ ಅನಿಸದಿದ್ದರೆ ಇನ್ನೊಂದು ಮಾತು: “ಕಲ್ಲು ಕರಗುವ ಸಮಯ”ದಲ್ಲಿ ಬೆಳೆಸಿಕೊಳ್ಳುವ ನಿಮ್ಮ ಮನಸ್ಥಿತಿಯನ್ನು ನೀವು ಜೀವನವಿಡೀ ಕಾಯ್ದುಕೊಳ್ಳಬಲ್ಲಿರಾದರೆ ನೀವು ಸಂತನಾಗಿಬಿಡುವ ಅಪಾಯವಿದೆ! ಹೀಗಾಗಿ,ಈ ಲೋಕದ ಎಲ್ಲ ಸಂತ,ಅವಧೂತ,ಡಿವೈನ್ ಫಿಲಾಸಫಿಗಳು ಏನೆಲ್ಲ ಹೇಳಬಯಸಿದವೋ-ಅದನ್ನೆಲ್ಲ ಹಾಯ್ಕು ತನ್ನದೇ ಟ್ಯೂನ್ ನಲ್ಲಿ ಸರಳವಾಗಿ ಹೇಳಿತು ಅಂತ ನನ್ನ ಗಟ್ಟಿನಂಬಿಕೆ. ಯಾಕೆಂದರೆ,ಹಾಯ್ಕುಗಳ ಪರಂಪರೆಯಲ್ಲಿ ಒಂದೇ ಒಂದು ಹಾಯ್ಕು ‘ನೋಡು’ವದಕ್ಕಾಗಿ ವರ್ಷಗಳ ಕಾಲ ಕಾದವರೂ ಇದ್ದಾರೆ ಮತ್ತು ಒಂದೇ ಒಂದು ಹಾಯ್ಕು ನೋಡಿ’ ಸಾಕ್ಷಾತ್ಕಾರ ಪಡೆದುಕೊಂಡಿರುವ ಉದಾಹರಣೆಗಳೂ ಉಂಟು. ಅಂತೆಯೇ ಹಾಯ್ಕು ಅನ್ನುವದು purest form of poetry which deals with mankind ಅಂತ ಹೇಳಬಲ್ಲೆ.
ಕೊನೆಯದಾಗಿ,ಹಾಯ್ಕು ಒಂದು treasure hunt ಥರ;ಅದೊಂದು ಅಸಂಖ್ಯಾತ ಮನೆಗಳುಳ್ಳ ಒಂದು ಪದಬಂಧ. ಬಹುಶಃ ನಾನು ಬಿಡಿಸಿರುವದು ಒಂದೆರಡು ಮನೆಗಳನ್ನು ಮಾತ್ರ. ಹಾಗಾಗಿಯೇ ಇಷ್ಟೆಲ್ಲ ಬರೆದಮೇಲೆ ನನಗೆ ತೀವ್ರವಾಗಿ ಅನಿಸಿದ್ದು: ಹಾಯ್ಕುಗಳ ಬಗ್ಗೆ ಇಷ್ಟೆಲ್ಲ ವಿವರಣೆಯ ಅಗತ್ಯವಿದೆಯಾ? ಅಷ್ಟಕ್ಕೂ ಇಷ್ಟೊಂದು ಬರೆದಾದ ಮೇಲೆ ಹಾಯ್ಕುಗಳ ಬಗ್ಗೆ ಎಲ್ಲ ವಿವರಿಸಿದಂತಾಯಿತೇ? ವಿನೀತನಾಗಿ ಹೇಳುವದಾದರೆ-
ನಾನೊಂದು ದಿನ
ಹಾಯ್ಕು ಮುಟ್ಟಿದೆ.
ಸಾಗರದ ಬೃಹತ್
ಜೀವಿಯಂತಿತ್ತು;
ವಿವರಿಸಿಯಾದ ಮೇಲೆ
ಅಮೀಬವಾಯಿತು..
                 ( ಇದು ಅವಧಿಯಲ್ಲಿ ಬಂದ ರಾಘವೇಂದ್ರ ಜೋಶಿ ಅವರ ಲೇಖನವಾಗಿದ್ದು ಮಾಹಿತಿಗಾಗಿ ಪ್ರಕಟಿಸಿಲಾಗಿದೆ)
(ಟಿಪ್ಪಣಿ: ಈ ಲೇಖನ ಸಿದ್ಧಪಡಿಸುವ ನಿಟ್ಟಿನಲ್ಲಿ ಹಾಯ್ಕುಗಳ ತಾಂತ್ರಿಕ ಕುಶಲತೆಯ ಬಗ್ಗೆ ಬರೆಯುವಾಗ,ಶ್ರೀಯುತ ಮಂಜುನಾಥ ಕೊಳ್ಳೇಗಾಲ ಅವರ ಹಾಯ್ಕು ಲೇಖನದ ವಿವರಗಳನ್ನು ತಕ್ಕಮಟ್ಟಿಗೆ ಬಳಸಿಕೊಂಡಿದ್ದೇನೆ.ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.)