Sunday, February 2, 2014

ರಾಮಗಿರಿ ಶ್ರೀ ಕರಿಸಿದ್ದೇಶ್ವರ ಸ್ವಾಮಿ ರಾಮಗಿರಿ ಪುಣ್ಯಕ್ಷೇತ್ರ. ಬೆಟ್ಟ._RAMAGIRI Karisiddeswara Temple




 - ಮಾಲತೇಶ್ ಅರಸ್ ಹರ್ತಿಮಠ
 ಸಿರು ಸೀರೆಯನುಟ್ಟ ಮರ-ಬಳ್ಳಿಗಳಿಂದ ಕೂಡಿದ ಬೆಟ್ಟ, ಹೂ ಬಿರಿದು ನಿಂತ ಗಿಡಗಂಟೆಗಳು, ಗಂಧ, ಹೊನ್ನೆ, ಬೀಟೆ ಸೇರಿದಂತೆ ವಿವಿಧ ಬಗೆಯ ಮರಗಳ ಸುಮಧುರ ಘಮಲು, ಸುವಾಸನೆಯಿಂದ ಕೂಡಿದ ವನ ಸುಮಗಳು, ಮಕರಂದ ಹೀರುವ ದುಂಬಿಗಳು. ಹಿಂಡಿಡು ಬರುವ ಜೇನು ನೊಣಗಳು, ಕಣ್ಣ ತುಂಬಾ ಕಾಣುವ  ಜೇನು  ಗೂಡುಗಳು, ಸುಂದರತೆಯನ್ನು ಇಮ್ಮಡಿಗೊಳಿಸುವ ಚಿಟ್ಟೆಗಳು,  ಕಿವಿಗಿಂಪಾದ ಜಾಗಟೆ ನಿನಾದ, ಕರಡಿಗೆ ಸದ್ದು....

 ಸುಂದರ ಬೆಟ್ಟಗಳ ನಡುವೆ ಕಾಣುವ ಪಾವನ ಕ್ಷೇತ್ರ ಅದುವೇ.. ಶ್ರೀ ಕರಿಸಿದ್ದೇಶ್ವರ ಸ್ವಾಮಿ ರಾಮಗಿರಿ ಪುಣ್ಯಕ್ಷೇತ್ರ. ಬೆಟ್ಟ ಗುಡ್ಡಗಳ ನಡುವಿನ ರಾಮಗಿರಿ ಒಂದು ಸುಂದರ ತಾಣ. ಹಚ್ಚ ಹಸಿರಿನ ಬೆಟ್ಟದಲ್ಲಿ ನೆಲೆ ನಿಂತಿರುವ ದೇವಗೆ ನಿತ್ಯ ಪರಿಸರ ಅಭಿಷೇಕ. ನಿತ್ಯ ಸಹಸ್ರಾರು ಭಕ್ತರ ಭೇಟಿ ಮತ್ತು  ಬೆಟ್ಟದ ಮುಂಭಾಗದ ಕಾಣುವ ಕೆರೆಯಿಂದಾಗಿ ಇಲ್ಲಿನ ಸೌಂದರ್ಯ ಮತ್ತಷ್ಟು ಹೆಚ್ಚಿದೆ.
 ಕೋಟೆಗಳ ನಾಡೆಂದೇ ಖ್ಯಾತಿಗಳಿಸಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಸುಪ್ರಸಿದ್ದ  ಕ್ಷೇತ್ರವೆಂದೇ ಹೆಸರು ಪಡೆದಿರುವುದೇ ಹೊಳಲ್ಕೆರೆ ತಾಲೂಕಿನ ರಾಮಗಿರಿ ಸುಕ್ಷೇತ್ರ. ಇಲ್ಲಿ ಕನಸುಗಳು ಅರಳುತ್ತವೆ. ಮನಸುಗಳು ಸಂಭ್ರಮಿಸುತ್ತವೆ. ಭಕ್ತಿಯ ಜತೆಗೆ ಇಲ್ಲಿ ಪರಿಸರ ದೇವತೆಯೇ ಎದ್ದು ಬರುತ್ತಾಳೆ ಎಂಬ ಭಾವನೆ ಮೂಡುತ್ತದೆ.

    323 ಮೆಟ್ಟಿಲು:  
 ರಾಮಗಿರಿ ಕ್ಷೇತ್ರ 21 ದೇವಾಲಯಗಳನ್ನು ಒಳಗೊಂಡಿರುವ  ಹೋಬಳಿ. ಇಲ್ಲಿ ವಿರಕ್ತಮಠ, ಮರಿದೇವರ ಮಠ, ಚರಂತಮಠಗಳೂ ಇವೆ. ಇಲ್ಲಿರುವ ಈ ಕರಿಸಿದ್ದೇಶ್ವರ ಸ್ವಾಮಿ ಮತ್ತು ವೀರಭದ್ರಸ್ವಾಮಿ ಬೆಟ್ಟ ಹತ್ತಲು 323 ಮೆಟ್ಟಿಲು ಹತ್ತಬೇಕು. ಬೆಟ್ಟವನ್ನು ಪ್ರವೇಶಿಸಿದಾಗ ಎಡಭಾಗದಲ್ಲಿ ಗಜಾನನ ದೇವಾಲಯ ಬಲಭಾಗದಲ್ಲಿ ಬಸವೇಶ್ವರ ದೇವಾಲಯ. ಮುನ್ನೆಡೆದರೇ ಅಲ್ಲಿ  ಪಾದ ಘಟ್ಟ, ನಡುವೆ ಬೈರಸಿದ್ದೇಶ್ವರ ಸ್ವಾಮಿ ಗುಹೆ. ಮೆಲ್ಲನೇ ಏರುತ್ತಲೇ ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇವಾಲಯ ಮತ್ತು ಉದ್ಬವಲಿಂಗ ಗೋಚರವಾಗುತ್ತದೆ.
 ಬಲಭಾಗದಲ್ಲಿ ವೀರಭದ್ರೇಶ್ವರ ದೇಗುಲವೂ ರಾರಾಜಿಸುತ್ತದೆ.

   ಬೆಟ್ಟದಲ್ಲಿ ಬಾವಿ :
 ಬೆಟ್ಟದ ಮೇಲಿರುವ ದೇವಾಲಯದೊಳಗೆ ಗಂಗಮ್ಮನ ಬಾವಿ ಇದೆ. ಇದು ಮಳೆ ಬಂದಾದ ನೀರು ತಳ ತಲುಪುತ್ತದೆ. ಮಳೆ ಬಾರದೇ ಬರ ಎದುರಾಗುವ ವೇಳೆ ಬಾವಿ ನೀರು ಮೇಲೆ ಬರುವ ಮೂಲಕ  ಮುನ್ಸೂಚನೆ ನೀಡುತ್ತದೆ.  ಈ ಬಾವಿ ಕಾಶಿಯಿಂದ ಸಂಪರ್ಕ ಇದೆ ಎಂಬ ನಂಬಿಕೆ.   ಈ ನೀರು ಹಲವು ರೋಗಗಳಿಗೆ ಸಂಜೀವಿನಿಯಿದ್ದಂತೆ. ಬೆಟ್ಟದ ತುತ್ತ ತುದಿಯನ್ನ ಮೇಲ್ದುರ್ಗವೆಂದು ಕರೆಯುತ್ತಾರೆ ಇಲ್ಲಿಯೂ ಉದ್ಬವ ಲಿಂಗವಿದೆ. ಅದಕ್ಕೆ ಹರಿಹರೇಶ್ವರ ಎಂಬ ಹೆಸರಿದೆ.
   ಪುರಾಣ ಪ್ರಸಿದ್ದ: 
 ರಾಮಾಯಣದಲ್ಲಿ ಈ ತಾಣವನ್ನು ಹಾಲುರಾಮೇಶ್ವರ, ರಾಮದೇವರು ಎನ್ನಲಾಗುತ್ತಿತ್ತು ಎಂಬ ನಂಬಿಕೆ ಇದೆ. ದೇವರು ಬೆಟ್ಟದಲ್ಲಿ ನೆಲೆಸಿರುವ ಕಾರಣ ರಾಮ ಮತ್ತು ಗಿರಿ (ಬೆಟ್ಟ) ಸೇರಿ ರಾಮಗಿರಿ ಎಂಬ ಹೆಸರು ಬಳಕೆಗೆ ಬಂದಿದೆ ಎನ್ನಲಾಗಿದೆ. ಜೊತೆಗೆ ಇಲ್ಲಿ ಸಾಧು ಸಂತರು ನೆಲೆಸಿ ಸ್ಥಳದ ಮಹಿಮೆ ಮತ್ತಷ್ಟು ಹೆಚ್ಚಿಸಿದ್ದಾರೆ. ಇಲ್ಲಿ ಪ್ರತಿ ವರ್ಷವೂ ಭಕ್ತರು
 ಕರಿಸಿದ್ದೇಶ್ವರನಿಗೆ ಮಾಲೆ ಹಾಕುತ್ತಾರೆ.
 ಕಾರ್ತಿಕೋತ್ಸವ ; 
 ಬಟ್ಟೆಯನ್ನು ಸಿಂಬೆ ರೀತಿ ಸುತ್ತಿ ತಯಾರಾದ ದೀಪಗಳನ್ನು ಬೆಟ್ಟದ ತುಂಬಾ ಮತ್ತು ಬೆಟ್ಟಕ್ಕೆ ಹತ್ತುವ ಪ್ರತಿ ಮೆಟ್ಟಿಲುಗಳ ಎರಡು ಬದಿ ಹಚ್ಚುವ ಮೂಲಕ ದೀಪೋತ್ಸವ ಕಾರ್ತಿಕೋತ್ಸವ ನಡೆಯುತ್ತದೆ. ಇದು ಲಕ್ಷ ದೀಪೋತ್ಸವ ಎಂದೇ ಖ್ಯಾತಿಗಳಿಸಿದೆ.
   ಬಾಳೆ ಪರಿಷೆ : 
  ಈ ಜಾತ್ರೆಯ ವಿಶೇಷ ಬಾಳೆಹಣ್ಣಿನ ಪರಿಷೆ. ಉತ್ಸವದ ಕೇಂದ್ರ ಬಿಂದುವೆಂದರೇ ಬಾಳೆಹಣ್ಣಿನ ರಾಶಿ. ಭಕ್ತರು ಹರಕೆಯ ಬಾಳೆಹಣ್ಣುಗಳನ್ನು ಬೆಟ್ಟದ ಮುಂಭಾಗದ ದ್ವಾರ ಬಾಗಿಲು ಮುಂಭಾಗ ದೊಡ್ಡ ರಾಶಿ ಹಾಕಿ ಪೂಜೆ ಮಾಡುತ್ತಾರೆ.  ಈ ರಾಶಿ ನೋಡಲು ಒಂದು ಸುಂದರ ಹಳದಿ ಬೆಟ್ಟದಂತೆ ಕಾಣುತ್ತದೆ. ನಂತರ ಈ ರಾಶಿ ಬಾಳೆಹಣ್ಣುಗಳನ್ನು ಪ್ರಸಾದವಾಗಿ ಹಂಚಲಾಗುತ್ತದೆ.  ಇದರ ಜೊತೆ ಉತ್ಸವ ಹೂವಿನ ಉತ್ಸವ, ಕದಳಿ ಸೇವೆ, ಪಲ್ಲಕ್ಕಿ ಉತ್ಸವ, ವೀರಗಾಸೆ, ಭಜನೆ ಕಾರ್ಯಕ್ರಮಗಳು ನಡೆಯುತ್ತವೆ.
 ಬಾಳೆ ಮಂಟಪ : 
 ಕರಿಸಿದ್ದೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ, ಕರಿಯಮ್ಮ ದೇವಿಯನ್ನು ಚರಂತ ಮಠದ ಮುಂಭಾಗ ಬಾಳೆ ದಿಂಡು, ವೀಳ್ಯದ ಎಲೆ ಮತ್ತು ನಾನಾ ರೀತಿ ಹೂಗಳನ್ನು ಬಳಸಿ ಮಂಟಪ ನಿರ್ಮಿಸಲಾಗುತ್ತದೆ. ಅಲ್ಲಿ ದೇವರನ್ನು ಪವಡಿಸಲಾಗುತ್ತದೆ. ಇದು ವಿಶೇಷವಾಗಿ ಬಾಳೆ ದಿಂಡಿನ ಮಂಟಪವಾಗಿರುತ್ತದೆ. ತಾವೂ ಕೂಡ ರಾಮಗಿರಿ ಕ್ಷೇತ್ರಕ್ಕೊಮ್ಮೆ ಭೇಟಿ ಕೊಡಿ. ಪವಾನರಾಗಿ.
   ಎರಡು ದಾರಿಗಳು: 
 ಇಲ್ಲಿ ಶ್ರಾವಣ ಬಂದರೆ ಸಾಕು ಎಲ್ಲಿಲ್ಲದ ಹಿಗ್ಗು. ಇನ್ನೂ ಕಡೇ ಕಾರ್ತಿಕ ಬಂದ್ರೆ ಊರ ಹಬ್ಬವೇ ನಡೆಯುತ್ತದೆ. ಇನ್ನು ಬೆಟ್ಟವನ್ನು ತಲುಪಲು ಎರಡು ದಾರಿಗಳಿವೆ. ಒಂದು ಮೆಟ್ಟಿಲುಗಳಿಂದ ಹತ್ತುವುದು. ಇನ್ನೊಂದು ಸಾಹಸದ ದಾರಿ. ಸಾಹಸ ಪ್ರವೃತ್ತಿಯ ಚಾರಣಿಗಳಿಗೆ ಕಲ್ಲು ಮುಳ್ಳಿನ ದಾರಿ ಇಷ್ಟವಾಗುತ್ತದೆ. ಬೆಟ್ಟದೊಳಗೊಂದು ರಸ್ತೆ ಇದ್ದು ಕಲ್ಲು ಮುಳ್ಳುಗಳ ಹಾದಿಯನ್ನು ಹಾಸುತ್ತದೆ.


 ಕಾರ್ತಿಕೋತ್ಸವ, ಲಕ್ಷ ದೀಪೋತ್ಸವ 
 ಕೋಟೆಗಳ ನಾಡು ಚಿತ್ರದುರ್ಗ ಜಿಲ್ಲೆಯ ರಾಮಗಿರಿ ಐತಿಹಾಸಿಕತೆಯನ್ನು ಹೊಂದಿರುವ ಮಹಾಕ್ಷೇತ್ರ. ಹೊಳಲ್ಕೆರೆ ತಾಲೂಕು ರಾಮಗಿರಿ ಗ್ರಾಮದ ಶ್ರೀ ಕರಿಸಿದ್ದೇಶ್ವರ ಸ್ವಾಮಿ ಕಾರ್ತಿಕೋತ್ಸವ, ಲಕ್ಷ ದೀಪೋತ್ಸವ ಹಾಗೂ ವಿನೂತನ ಬಾಳೇಹಣ್ಣು ಪರಿಷೆ ನಡೆಯತ್ತದೆ.  ನಡು ರಾತ್ರಿಯಲ್ಲಿ ಹಬ್ಬದ ಸಂಭ್ರಮದ ಜೊತೆಗೆ ಹೊಸವರ್ಷದ ಸಂಭ್ರವನ್ನು ಆಚರಿಸಬಹುದು. ರಾಜ್ಯದ ನಾನಾ ಭಾಗಗಳಿಂದ ಮೂರರಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ.

   ಹಸಿರ ಸೊಬಗು ಕಾಣಾ.
   ಹಸಿರು ಸೀರೆಯನುಟ್ಟ ಮರ-ಬಳ್ಳಿಗಳಿಂದ ಕೂಡಿದ ಬೆಟ್ಟ ಇದು. ಬೆಟ್ಟದ ತಪ್ಪಲು, ಹೂ ಬಿರಿದು ನಿಂತ ಗಿಡ ಗಂಟೆಗಳು, ವಿವಿಧ ಬಗೆಯ ಮರಗಳ ಘಮಲು, ಸುವಾಸನೆಯಿಂದ ಕೂಡಿದ ವನಸುಮಗಳ ಮಕರಂದ ಹೀರುವ ದುಂಬಿಗಳು. ಹಿಂಡಿಡು ಬರುವ ಜೇನು ನೊಣಗಳು, ಸುಂದರತೆಯನ್ನು ಇಮ್ಮಡಿಗೊಳಿಸುವ ಚಿಟ್ಟೆಗಳು, ಇವೆಲ್ಲವೂ ಬೆಟ್ಟಹೊಕ್ಕರೇ ಸಾಕು ನಿಮಗೆ ಸಿಗುತ್ತವೆ.
 ಲಿಂಗ ಉದ್ಭವ
365 ಮೆಟ್ಟಿಲುಗಳಿರುವ ರಾಮಗಿರಿ ಬೆಟ್ಟ ನೋಡಲು ಆಕರ್ಷಕವಾಗಿ ಕಾಣುತ್ತದೆ. ಗ್ರಾಮಕ್ಕೆ ತನ್ನದೇ ಆದ ಕುತೂಹಲಭರಿತ ಇತಿಹಾಸವಿದೆ. `ಹಿಂದಿನ ಕಾಲದಲ್ಲಿ ಈ ಪ್ರದೇಶ ದಂಡಕಾರಣ್ಯವಾಗಿತ್ತು. ಶ್ರೀರಾಮ ಅಜ್ಞಾತ ವಾಸದಲ್ಲಿದ್ದಾಗ ಇಲ್ಲಿಗೆ ಬಂದು ತಂಗಿದ್ದ. ಶ್ರೀರಾಮನಿಗೆ ನಿತ್ಯ ಪೂಜೆ ಸಲ್ಲಿಸಲು ಇಲ್ಲಿ ಯಾವುದೇ ವ್ಯವಸ್ಥೆಗಳಿರಲಿಲ್ಲ. ಆಗ ಇಲ್ಲಿಗೆ ಬಂದ ಒಬ್ಬ ಋಷಿಮುನಿಯನ್ನು ಶ್ರೀರಾಮ ಪೂಜೆಗೆ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಳ್ಳುತ್ತಾನೆ. ಆಗ ಋಷಿ ಅಲ್ಲಿ ಒಂದು ಲಿಂಗ ಉದ್ಭವವಾಗುವಂತೆ ಮಾಡಿದರು. ಪೂಜೆಗೆ ಬೇಕಾದ ನೀರಿಗಾಗಿ ಬೆತ್ತ (ಊರುಗೋಲು)ದಿಂದ ನೆಲ ಮುಟ್ಟಿ ನೀರು ಚಿಮ್ಮುವಂತೆ ಮಾಡಿ `ತೃಪ್ತಿಯಾಗುವಂತೆ ಪೂಜಿಸು' ಎಂದು ಹೇಳಿದರಂತೆ. ರಾಮ ಹಲವು ದಿನ ಇಲ್ಲಿ ತಂಗಿದ್ದರಿಂದ ಇದು `ರಾಮನಗಿರಿ' ಆಗಿ ಬರಬರುತ್ತ `ರಾಮಗಿರಿ' ಆಯಿತು ಎಂದು ಹಿರಿಯರು ದಂತಕತೆ ಹೇಳುತ್ತಾರೆ.
ದೇವರಿಗೆ ಕರಿಸಿದ್ದೇಶ್ವರ ಅಂತ ಹೆಸರು ಬಂದಿದ್ದಕ್ಕೂ ಒಂದು ಪವಾಡ ಕತೆಯಿದೆ. ಹಿಂದೆ ಹೈದರಾಲಿ ಬಾಗೂರು ಪಟ್ಟಣದ ಮೇಲೆ ಯುದ್ದ ಮಾಡಲು ಸೈನ್ಯ ಸಮೇತ ಇದೇ ಮಾರ್ಗದಲ್ಲಿ ಹೋಗುತ್ತಿದ್ದಾಗ ಇಲ್ಲಿ ಅವರ ಪ್ರೀತಿಯ ಪಟ್ಟದ ಆನೆ ಸಾವನ್ನಪ್ಪಿತು. ಬೆಟ್ಟದ ಮೇಲಿದ್ದ ದೇವರು ಸಾಧುವಿನ ವೇಷದಲ್ಲಿ ಬಂದು `ನಿನ್ನ ಆನೆ ಸತ್ತಿಲ್ಲ, ತಟ್ಟಿ ಎಬ್ಬಿಸು' ಎಂದು ಹೇಳಿತ್ತು. ರಾಜ ಆನೆಯನ್ನು ತಟ್ಟಿದಾಗ ಎದ್ದು ನಿಂತುಕೊಂಡಿತು. ಆನೆ (ಕರಿ)ಯನ್ನು ಬದುಕಿಸಿದ (ಸಿದ್ಧಿಸಿದ)ದೇವರಿಗೆ ಅಂದಿನಿಂದ ಕರಿಸಿದ್ದೇಶ್ವರ ಎಂದು ಹೆಸರು ಬಂತು. ನಂತರ ರಾಜ ಬಾಗೂರು ಪಟ್ಟಣಕ್ಕೆ ಹೇಗೆ ಹೋಗಬೇಕು ಎಂದು ಕೇಳಿದಾಗ ಇಲ್ಲಿನ ಜನ `ಮೂರು ಸಮುದ್ರಗಳನ್ನು (ಚನ್ನ ಸಮುದ್ರ, ಗುಂಡ ಸಮುದ್ರ, ಗಂಗಸಮುದ್ರ ಗ್ರಾಮದ ಹೆಸರುಗಳು) ದಾಟಿ ಹೋದರೆ ಬಾಗೂರು ಸಿಗುತ್ತದೆ ಎಂದರಂತೆ. ಆಗ ರಾಜ ಮೂರು ಸಮುದ್ರ ದಾಟಲಾಗುವುದಿಲ್ಲ ಎಂದು ಹೆದರಿ ವಾಪಸ್ ಹೋದನಂತೆ ಎಂದು ಗ್ರಾಮದ ಹಿರಿಯರು ಪುರಾಣ ಕತೆ ಹೇಳುತ್ತಾರೆ.
ದೇವಾಲಯದ ಒಳಗೆ ಒಂದು ಪುಷ್ಕರಣಿ ಇದೆ. ದೇವರ ಅಪ್ಪಣೆಯಂತೆ ವಿವಿಧ ರೋಗಗಳ ನಿವಾರಣೆಗಾಗಿ ಇಂದಿಗೂ ಇದರ ನೀರನ್ನು ಕೊಡಲಾಗುತ್ತದೆ. ಬರಗಾಲದ ಮುನ್ಸೂಚನೆಗೆ ಇದರಲ್ಲಿನ ನೀರು ಮೇಲೇರುತ್ತದೆ. ಮಳೆ ಬರುವ ಸೂಚನೆ ಇದ್ದರೆ ನೀರು ಕೆಳಕ್ಕೆ ಹೋಗುತ್ತದೆ' ಎಂದು ಅನುಭವಿಗಳು ನುಡಿಯುತ್ತಾರೆ.

No comments:

Post a Comment