Sunday, January 25, 2015

L.V.Yogeesh Kumar RAMAGIRI_ Reporter VijayaKarnataka Holalkere


ಭಂಡಾರದೊಡೆಯನ ಜಾತ್ರೆಗೆ ಬನ್ನಿ/ ಮೈಲಾರ ಜಾತ್ರೆಗೆ ಬನ್ನಿ - MAILARA Jaatre

ಭಂಡಾರದೊಡೆಯನ ಜಾತ್ರೆಗೆ ಬನ್ನಿ/  ಮೈಲಾರ ಜಾತ್ರೆಗೆ ಬನ್ನಿ 

 ಮೈಲಾರ ತುಂಗಭದ್ರ ನದಿ ದಂಡೆಯಲ್ಲಿರುವ ಚಿಕ್ಕ ಗ್ರಾಮ. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಈ ಗ್ರಾಮ ಐತಿಹಾಸಿಕ ಪ್ರಸಿದ್ಧ ಹಾಗೂ ರಾಜ್ಯದ ಅತಿ ದೊಡ್ಡ ಜಾತ್ರೆ ನಡೆಯುವ ಸ್ಥಳ. ಈ ಊರಿನ ಹೆಸರೇ ಸೂಚಿಸುವಂತೆ ಇಲ್ಲಿನ ದೇವರಾದ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಲಕ್ಷಾಂತರ ಜನ ಸೇರುವ ಜಾತ್ರಾಮಹೋತ್ಸವ.
 ಕಾರ್ಣಿಕೋತ್ಸವ ಎಂದರೆ ಭವಿಷ್ಯ ಹೇಳುವುದು ಎಂದರ್ಥ. ಕಾರ್ಣಿಕದ ಗೊರವ ಇಡೀ ವರ್ಷದ ಭವಿಷ್ಯವನ್ನು ಭಾರತ ಹುಣ್ಣಿಮೆಯ ಸಂದರ್ಭದಲ್ಲಿ ಹೇಳುವುದು ಕಾರ್ಣಿಕೋತ್ಸವ. ಈ ಉತ್ಸವ ನಡೆಯುವುದೇ ಒಂದು  ಇತಿಹಾಸ.
 ಮೈಲಾರಲಿಂಗೇಶ್ವರನನ್ನು ‘ಏಳು ಕೋಟಿ’ಎಂದೇ ಕರೆಯುತ್ತಾರೆ. ದೇಶದ ಏಳುಕೋಟಿ ಭಕ್ತರ ಆರಾಧ್ಯ ದೈವ ಎಂಬ ಕಾರಣಕ್ಕೆ ಈ ರೀತಿ ಕರೆಯಲಾಗುತ್ತದೆ. ಜಾತ್ರೆಗೆ ಬಂದವರೆಲ್ಲ ‘ಏಳು ಕೋಟಿ’, ‘ಏಳುಕೋಟಿ’ ಎಂದೇ ಕೂಗುತ್ತಿರುತ್ತಾರೆ.ಇದಕ್ಕೆ ಪುರಾಣದಲ್ಲಿ ಕತೆಯೂ ಇದೆ. ಏಳು ಕೋಟಿ ಮಂತ್ರ ಜಪಿಸಿ ಬ್ರಹ್ಮನಿಂದವರ ಪಡೆದು ಲೋಕಕಂಟಕರಾದ ಅಸುರರನ್ನು ತನ್ನ ಏಳು ಕೋಟಿ ದೇವಗಣದೊಂದಿಗೆ ಸಂಹರಿಸಿದ ಎಂಬುದು ಇಲ್ಲಿರುವ ಕತೆ. ಮೈಲಾರ ಎಂಬುದು ಅತ್ಯಂತ ಪ್ರಾಚೀನವಾದ ಹೆಸರು. ಬ್ರಹ್ಮಾಂಡ ಪುರಾಣದ 18ನೇ ಅಧ್ಯಾಯದಲ್ಲಿ ಈ ಕ್ಷೇತ್ರದವರ್ಣನೆ ಇದೆ. ದ್ವಾಪರಯುಗಕ್ಕೂ ಮುನ್ನವೇ ಮೈಲಾರಲಿಂಗೇಶ್ವರ ಇದ್ದ ಎಂಬುದಕ್ಕೆ ಸಾಕಷ್ಟು ಕತೆಗಳಿವೆ.
  ಲೋಕಕಂಟಕರಾದ ಅಸುರರನ್ನು ಸಂಹಾರ ಮಾಡಲು ಶಿವ ಮೈಲಾರಲಿಂಗನ ವೇಷಧಾರಿಯಾಗಿದ್ದ. ಇದೇ ಸ್ಥಳದಲ್ಲಿ ಸಂಹಾರ ಮಾಡಿದ ಎಂಬುದು ಇಲ್ಲಿನ ಪುರಾಣ. ಹನ್ನೊಂದು ದಿನಗಳ ಯುದ್ಧವನ್ನು ಗೆದ್ದ ದಿನವೇ ಕಾರ್ಣಿಕ. ಇತರೆ ದಿನಗಳ ಪ್ರತೀಕವಾಗಿ ಸರಪಳಿ, ಓಕಳಿ ಇವೆ ಮೊದಲಾದ ಕಾರ್ಯಕ್ರಮಗಳು ಇದ್ದರೂ ಕಾರ್ಣಿಕವೇ ಅತ್ಯಂತ ಪ್ರಮುಖ.
   ಕಪಿಲ ವಂಶಸ್ಥರು :
 ಇಲ್ಲಿನ ಮೈಲಾರಲಿಂಗನ ದೇವಸ್ಥಾನವನ್ನು 1901ರಲ್ಲಿ ನಿರ್ಮಾಣ ಮಾಡಲಾಗಿದೆ. ಕಪಿಲ ವಂಶಸ್ಥರು ಪೂಜಾ ಕಾರ್ಯ ನಡೆಸುತ್ತಿದ್ದಾರೆ. ಕರ್ನಾಟಕದ ಅನೇಕ ಕಡೆಗಳಲ್ಲಿ ಮೈಲಾರಲಿಂಗನ ದೇವಾಲಯಗಳಿವೆ. ಆದರೆ ಹಡಗಲಿ ತಾಲ್ಲೂಕಿನ ಮೈಲಾರವೇ ಮೂಲ ಕ್ಷೇತ್ರ. ಕರ್ನಾಟಕದಲ್ಲಿ ಮಾತ್ರವಲ್ಲದೇ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಿಂದ ಭಕ್ತವೃಂದವೇ ಇಲ್ಲಿಗೆ ಹರಿದುಬರುತ್ತದೆ.
 ಜಾತ್ಯಾತೀತ ಸ್ವರ್ಗ:
 ಜಾತಿ, ಮತ, ಪಂಥ ಮೀರಿದ ಜಾತ್ಯಾತೀತ ದೇವರು ಮೈಲಾರಲಿಂಗ, ಏಕೆಂದರೆ ಇಲ್ಲಿಗೆ ಎಲ್ಲಾ ಜಾತಿಯವರು ಭಕ್ತರೇ. ಪ್ರತಿ ವರ್ಷ ಫೆಬ್ರವರಿಯಲ್ಲಿ ಬರುವ ಭರತ ಹುಣ್ಣಿಮೆಯ ಸಂದರ್ಭದಲ್ಲಿ ಮೈಲಾರದಲ್ಲಿ ದೊಡ್ಡ ಜಾತ್ರೆಯೆ ನಡೆಯುತ್ತದೆ. ಹುಣ್ಣಿಮೆಯ ಎರಡನೇ ದಿನಕ್ಕೆ ಕಾರ್ಣಿಕೋತ್ಸವ ನಡೆಯುತ್ತದೆ. ನಾಡಿನಾದ್ಯಂತ ಗೊರವರಿದ್ದು  ಕಾರ್ಣಿಕ ಹೇಳುವುದು ಮಾತ್ರ ಒಂದೇ ಕುಟುಂಬಕ್ಕೆ ಹೇಳಿದ ಗೊರವ. ಆತ ಹನ್ನೊಂದು ದಿನಗಳ ಕಾಲ ಉಪವಾಸ ಕುಳಿತಿರುತ್ತಾನೆ. ಮೈಲಾರದ ದೇವಾಲಯದಿಂದ ಸುಮಾರು ಒಂದೂವರೆ ಕಿ.ಮೀ.ಗಳಷ್ಟು ದೂರದಲ್ಲಿರುವ ಡೆಂಕನ ಮರಡಿ ಎಂಬಲ್ಲಿ ಇರುವ ಮಂದಿರದಲ್ಲಿ ಈತಉಪವಾಸ ಇರುತ್ತಾನೆ. ಕಾರ್ಣಿಕದ ದಿವಸ ಮಧ್ಯಾಹ್ನ ದೇವಾಲಯದಿಂದಸ್ವಾಮೀಜಿಗಳು ಮತ್ತು ದೇವರ ಮೆರವಣಿಗೆ ಹೊರಡುತ್ತದೆ. ಮರಡಿಗೆ ಹೋಗಿ ಮೈಲಾರನಭಕ್ತರಾದ ಗೊರವರು ನಡೆಸುವ ದೋಣಿಸೇವೆ ಪ್ರಮುಖವಾದದ್ದು.
 ದೋಣಿಸೇವೆ:
 ಪ್ರತಿಯೊಬ್ಬ ಭಕ್ತರು ದೋಣಿ ತುಂಬಿಸುವುದು ಅದನ್ನು ಗೊರವರು ಪ್ರಾಣಿಗಳಂತೆ ತಿನ್ನುವುದು ದೋಣಿಸೇವೆ. ಕಂಬಳಿಯ ಅಂಗಿ ತೊಟ್ಟು, ಒಂದು ಕೈಯಲ್ಲಿ ಕೊಳಲು ಹಿಡಿದು, ಡಮರುಗ ಬಾರಿಸುತ್ತ ಹೆಗಲ ಮೇಲೆ ಮರದ ಅಥವಾ ಹಿತ್ತಾಳೆಯ ದೋಣಿಯಾಕಾರದ ಪಾತ್ರೆ ಹಾಕಿಕೊಂಡು ಗೊರವರು ಊರೂರು ಸುತ್ತುತ್ತಾರೆ.ಆದರೆ ಜಾತ್ರೆಯ ಸಂದರ್ಭದಲ್ಲಿ ಮಾತ್ರ ಮೈಲಾರಕ್ಕೆ ಬರುತ್ತಾರೆ. ಭಕ್ತರು ಇವರನ್ನು ಕರೆದು ಎಡೆಯಾಕುತ್ತಾರೆ. ದೋಣಿಯನ್ನು ಕಂಬಳಿಯ ಮೇಲೆ ಇಟ್ಟು ಅದಕ್ಕೆ ಬಾಳೆಹಣ್ಣು, ಹಾಲು, ತುಪ್ಪ, ದೋಸೆ, ಒಬ್ಬಟ್ಟು ಹೀಗೆ ತಲೆವಾರಿ ತಿಂಡಿಗಳನ್ನು ಅದರಲ್ಲಿ ಬೆರೆಸಲಾಗುತ್ತದೆ. ಗೊರವರು ನಾಲ್ಕೈದು ಜನ ಪ್ರಾಣಿಗಳಂತೆ ಆಟವಾಡುತ್ತ, ನಂತರ ತಮ್ಮಲ್ಲೇ ಒಬ್ಬರನ್ನು ಸತ್ತು ಹೋದವನೆಂದು ಕಂಬಳಿಯಿಂದ ಮುಚ್ಚುತ್ತಾರೆ. ನಂತರ ಭಕ್ತರಿಂದ ಆತನ ತಿಥಿ ಮಾಡುವುದಾಗಿ ಹಣ ಸಂಗ್ರಹಿಸುತ್ತಾರೆ. ಅನಂತರ ಆತನನ್ನು ದೇವರಭಂಡಾರ ಹಾಕಿ ಎಬ್ಬಿಸಿ ದೋಣಿಯಲ್ಲಿ ಪ್ರಾಣಿಯಂತೆತಿನ್ನುತ್ತಾರೆ. ಈ ಜಾನಪದ ಉತ್ಸವ ನೋಡಲು ಆಕರ್ಷಕವಾಗಿರುತ್ತದೆ.

 ಫೆ. 5 .2015 ಕ್ಕೆ ಕಾರ್ಣಿಕೋತ್ಸವ
 ಮೈಲಾರಲಿಂಗೇಶ್ವರನನ್ನು ‘ಏಳು ಕೋಟಿ’ ಎಂದೇ ಕರೆಯುತ್ತಾರೆ. ದೇಶದ ಏಳು ಕೋಟಿ ಭಕ್ತರ ಆರಾಧ್ಯ ದೈವ ಎಂಬ ಕಾರಣಕ್ಕೆ ಈ
 ರೀತಿ ಕರೆಯಲಾಗುತ್ತದೆ. ಜಾತ್ರೆಗೆ ಬಂದವರೆಲ್ಲ ‘ಏಳು ಕೋಟಿ’,‘ಏಳು ಕೋಟಿ’ ಎಂದೇ ಕೂಗುತ್ತಿರುತ್ತಾರೆ. ಇದಕ್ಕೆ ಪುರಾಣದಲ್ಲಿ
 ಕತೆಯೂ ಇದೆ. ಏಳು ಕೋಟಿ ಮಂತ್ರ ಜಪಿಸಿ ಬ್ರಹ್ಮನಿಂದ ವರಪಡೆದು ಲೋಕಕಂಟಕರಾದ ಅಸುರರನ್ನು ತನ್ನ ಏಳು ಕೋಟಿ
 ದೇವಗಣದೊಂದಿಗೆ ಸಂಹರಿಸಿದ ಎಂಬುದು ಇಲ್ಲಿರುವ ಕತೆ. ವಿದ್ಯುತ್ ಕಂಬದಷ್ಟು ಎತ್ತರದ ಕಬ್ಬಿಣದ ಬಿಲ್ಲು ಮತ್ತು ದೇವರನ್ನು ಕಾರ್ಣಿಕದ ಮೈದಾನಕ್ಕೆ ಕರೆತರಲಾಗುತ್ತದೆ. ಬಿಲ್ಲಿಗೆ ಬಾಳೆಹಣ್ಣು, ತುಪ್ಪ, ಹಾಲು, ಸಕ್ಕರೆಯಿಂದ ಅಭಿಷೇಕ ಮಾಡಿರುತ್ತಾರೆ.
 ಮೈಲಾರಲಿಂಗ ಅಸುರರ ಜತೆ ಈ ಮೇದಾನದಲಿ ್ಲ ಕಾರ್ಣಿಕ ನಡೆಯುತ್ತದೆ.  ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಸ್ವಾಮೀಜಿ ಕುದುರೆಯ ಮೇಲೆ ಸವಾರಿ ಹೋಗುತ್ತಾರೆ. ಇದು ಮೈಲಾರಲಿಂಗನ ವಾಹನ ಕುದುರೆ ಎಂಬುದರ ಪ್ರತೀಕವಾಗಿದೆ. ಈ ಮೈದಾನ ಹೊಲವಾಗಿದ್ದರೂ ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛ ಮಾಡಿಕೊಡಲಾಗುತ್ತದೆ. ಮೆರವಣಿಗೆ ಅಲ್ಲಿಗೆ ಬರುವ ವೇಳೆಗೆ ಲಕ್ಷಾಂತರ ಭಕ್ತರು ಮೈದಾನದ ಸುತ್ತಲು ಸೇರಿರುತ್ತಾರೆ. ಕಾರ್ಣಿಕದ ಗೊರವನನ್ನು ಹೊತ್ತು ತರಲಾಗುತ್ತದೆ. ಸೂಚಿ ನೆಲಕ್ಕೆ ಬಿದ್ದರು ಕೇಳಿಸುವಷ್ಟು ನಿಶ್ಯಬ್ದತೆ ಆವರಿಸುತ್ತದೆ. ಸ್ವಾಮೀಜಿಯ ಅಪ್ಪಣೆ ಪಡೆದಗೊರವ ಚಕಚಕನೆ ಬಿಲ್ಲಿನ ತುತ್ತ ತುದಿಗೆ ಏರುತ್ತಾನೆ.‘ಸದ್ದಲೇ ಸದ್ದು’ ಎಂದು ಕೂಗಿದವನೇ ಆ ವರ್ಷದ ಭವಿಷ್ಯವಾಣಿಯನ್ನು ನುಡಿದು ಕೆಳಗೆ ಬೀಳುತ್ತಾನೆ. ಕೆಳಗೆ ಇರುವ ಗೊರವರು ತಮ್ಮ ಕೈಗಳಿಂದ ಗೊರವನ್ನು ಹಿಡಿದು ದೇವಾಲಯಕ್ಕೆ ಕರೆ ತರುತ್ತಾರೆ.  ಮೈಲಾರದಂತಹ ಸಣ್ಣ ಹಳ್ಳಿ 6 ಲಕ್ಷಕ್ಕೂ ಮಿಕ್ಕು ಜನರನ್ನು ಸೇರಿಸಿಕೊಂಡಿರುತ್ತದೆ. ಅಂದಾಜಿನ ಪ್ರಕಾರ ಕೆಲವರ್ಷ 10 ಲಕ್ಷದಷ್ಟು ಜನ ಇಲ್ಲಿ ಸೇರಿದ್ದಾರೆ. ತುಂಗಾನದಿಯಲ್ಲಿ ಮಿಂದು ಮೈಲಾರನ ದರ್ಶನದಿಂದ ಪಾವನವಾಗುತ್ತಾರೆ.










Saturday, January 24, 2015

ಚಿತ್ರದುರ್ಗ ಜಿಲ್ಲೆಯ ಪ್ರವಾಸಿ ತಾಣಗಳು_ Malathesh Urs

 

ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇವಾಲಯ ರಾಮಗಿರಿ
ತಲುಪುವುದು ಹೇಗೆ ?ಬೆಂಗಳೂರು-ಹುಬ್ಬಳ್ಳಿ ರೈಲು ಮಾರ್ಗದಲ್ಲಿದೆ.
ದೂರ
ಜಿಲ್ಲಾ ಕೇಂದ್ರದಿಂದ: ೫೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೧೨ ಕಿ.ಮೀ.
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯ ಬಳಿ ಇರುವ ಪುಣ್ಯಕ್ಷೇತ್ರವಿದು. ಸುಂದರವಾದ ಬೆಟ್ಟ ಮನೋಹರವಾದ ಕೆರೆ, ಕೆರೆಯಲ್ಲಿ ಕಾಣುವ ಬೆಟ್ಟದ ಪ್ರತಿಬಿಂಬ ಪ್ರವಾಸಿಗರನ್ನು ಮುದಗೊಳಿಸುತ್ತದೆ. ಬೆಟ್ಟದ ಮೇಲೆ ಕರಿಸಿದ್ದೇಶ್ವರವಿದ್ದು ಅಲ್ಲಿ ಕಾಶಿ ಜಲವೆಂದೇ ಕರೆಯಲ್ಪಡುವ ಪುಣ್ಯತೀರ್ಥವಿದೆ. ಈ ಪುಣ್ಯತೀರ್ಥವಾದ ಗಂಗಾಮಾತೆಯು ಆಳಕ್ಕೆ ಹೋದಂತೆ ಸುತ್ತಲಿನ ಪ್ರದೇಶಕ್ಕೆ ಉತ್ತಮ ಮಳೆ ಬರುತ್ತದೆ. ಮೇಲಕ್ಕೆ ಬಂದಂತೆ ಬರಗಾಲ ಬರುತ್ತದೆ ಎಂಬ ನಂಬಿಕೆಯಿದ್ದು ಇದು ಇಂದಿಗೂ ವಿಸ್ಮಯಕಾರಿಯಾದ ಸತ್ಯವಾಗಿದೆ.

         *********************************************************
ಶ್ರೀ ಹಾಲುರಾಮೇಶ್ವರ ಕ್ಷೇತ್ರ
ತಲುಪುವುದು ಹೇಗೆ ?ಹೊಸದುರ್ಗ-ಜಾನಕಲ್‌ಮಧ್ಯೆ ಇದೆ.
ದೂರ
ಜಿಲ್ಲಾ ಕೇಂದ್ರದಿಂದ: ೫೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೧೨ ಕಿ.ಮೀ.
ಹೊಸದುರ್ಗ ತಾಲ್ಲೂಕಿನ ಹಾಲುರಾಮೇಶ್ವರ ಕ್ಷೇತ್ರವು ಕರ್ನಾಟಕದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿರುವ ಪುಣ್ಯಕ್ಷೇತ್ರವಾಗಿದೆ. ಶ್ರೀರಾಮನು ಪ್ರತಿಷ್ಠಾಪಿಸಿದನು ಎನ್ನಲಾದ ಶಿವಲಿಂಗವು ಹಾಗೂ ಪುರಾಣಕಾಲದ ಗಂಗಾ ಕೊಳವು ಇದೆ. ಗಂಗಾ ಕೊಳದಲ್ಲಿ  ಭಕ್ತರು ಗಂಗಾದೇವಿಗೆ ನಮಸ್ಕರಿಸಿ ತಮ್ಮ ಮನಸ್ಸಿನಲ್ಲಿ ಕೋರಿಕೊಳ್ಳುತ್ತಾರೆ. ಗಂಗಾ ಕೊಳದಲ್ಲಿ ಬರುವ ವಸ್ತುವನ್ನು ಆಧಾರಿಸಿ ಅಲ್ಲಿನ ಅರ್ಚಕರು ಬಯಕೆ ಈಡೇರುವ ಬಗ್ಗೆ ತಿಳಿಸುತ್ತಾರೆ. ಬೇಡಿದ ಫಲಗಳು ದೊರೆಯುತ್ತಿರುವುದು ಅಗೋಚರವಾದ ದೈವಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ಮೊಸರನ್ನ, ಭಾರವಾದ ವಸ್ತುಗಳಾದ ನಾಣ್ಯ, ತೆಂಗಿನಕಾಯಿ ತೇಲಿಬರುವುದು ಸೋಜಿಗದ ಸಂಗತಿಯೇ ಸರಿ. ಇದು ಜಗತ್ತಿನ ವಿಸ್ಮಯ ಹಾಗೂ ಸವಾಲಿನ ಅಂಶವಾಗಿದೆ.

    *********************************************************
ಶ್ರೀ ಗವಿರಂಗನಾಥಸ್ವಾಮಿಯ ಪುಣ್ಯಕ್ಷೇತ್ರಗವಿರಂಗಾಪುರ
ತಲುಪುವುದು ಹೇಗೆ ?ಹೊಸದುರ್ಗ-ಬೆಂಗಳೂರು ಮಾರ್ಗ ಮಧ್ಯೆ ಇದೆ.
ದೂರ
ಜಿಲ್ಲಾ ಕೇಂದ್ರದಿಂದ: ೯೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೩೦ ಕಿ.ಮೀ.
ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಬಳಿಯಿರುವ ಈ ಕ್ಷೇತ್ರವು ೧೫ನೇ ಶತಮಾನದ ಬೂದಿಹಾಳು ಕೋಟೆಯ ಪಾಳೇಯಗಾರರ ಸಿರುಮನಾಯಕನ ಕಾಲದಲ್ಲಿ ಅಭಿವೃದ್ಧಿಯಾಗಿರುವ ಸಾಧ್ಯತೆಯಿದೆ. ವಿಷ್ಣುವಿನ ದಶಾವತಾರದಲ್ಲಿ ಒಂದಾದ ಕೂರ್ಮಾವತಾರದ ಶಿಲಾಮೂರ್ತಿ ಇರುವ ಈ ಸ್ಥಳ ಭಾರದಲ್ಲಿರುವ ಮೂರು ಕೂರ್ಮಾವತಾರದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಚೈತ್ರಬಹುಳ ಚಿತ್ತಾ ನಕ್ಷತ್ರದಂದು ಇಲ್ಲಿ ವಿಜೃಂಭಣೆಯಿಂದ ನಡೆಯುವ ರಥೋತ್ಸವವು ನಾಡಿನ  ಮೂಲೆ ಮೂಲೆಗಳಿಂದ ಅಸಂಖ್ಯಾತ ಭಕ್ತಾದಿಗಳನ್ನು ಆಕರ್ಷಿಸುತದೆ.

*********************************************************
ಸಾಣೇಹಳ್ಳಿ ಬಯಲು ರಂಗಮಂದಿರ
ತಲುಪುವುದು ಹೇಗೆ ?ಹೊಸದುರ್ಗ-ತರೀಕೆರೆ ಮಾರ್ಗ ಮಧ್ಯೆ ಇದೆ.
ದೂರ
ಜಿಲ್ಲಾ ಕೇಂದ್ರದಿಂದ: ೭೫ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ.
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ಭಾರತ ರಂಗ ಚಟುವಟಿಕೆಗಳಲ್ಲಿ ಗಣನೀಯವಾದ ಸ್ಥಾನ ಪಡೆದ ಕೇಂದ್ರವಾಗಿದೆ. ಗ್ರೀಕ್‌ಮಾದರಿಯಲ್ಲಿ ನಿರ್ಮಿಸಲಾದ ಬಯಲು ರಂಗಮಂದಿರ ಭಾರತದಲ್ಲೇ ಅಪರೂಪ ಇದಕ್ಕೆ ಕಾರಣಕರ್ತರೆಂದರೆ ರಂಗಜಂಗಮ ದಿ|| ಸಿ.ಜಿ.ಕೆ.ಯವರು ಮತ್ತು ಪಂಡಿತಾರಾಧ್ಯ ಶ್ರೀಗಳು. ಪ್ರತಿ ವರ್ಷ ನವೆಂಬರ್‌೧ರಿಂದ ೭ರವರೆಗೆ ನಡೆಉವ ನಾಟಕೋತ್ಸವ ರಾಷ್ಟ್ರದ ಗಮನವನ್ನೇ ಸೆಳೆದಿದೆ.

*********************************************************
ರಾಷ್ಟ್ರೀಯ ಭೂ ವೈಜ್ಞಾನಿಕ ಸ್ಮಾರಕ
ತಲುಪುವುದು ಹೇಗೆ ?ಚಿತ್ರದುರ್ಗ-ಬೆಂಗಳೂರು ಮಾರ್ಗ ರಾ.ಹೆ. ೪ ರಲ್ಲಿ
ಬುರುಜರೊಪ್ಪದಿಂದ ೪ ಕಿ.ಮೀ. ದೂರದಲ್ಲಿದೆ.
ದೂರ
ಜಿಲ್ಲಾ ಕೇಂದ್ರದಿಂದ: ೨೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೨೩ ಕಿ.ಮೀ.
ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಗ್ರಾಮದ ಪಕ್ಕದ ಪುಟ್ಟ ದಿಬ್ಬದ ಮೇಲೆ ಕಾಣಸಿಗುವ ದಿಂಬಿನಾಕಾರದ ಶಿಲೆಗಳು ವಿಶಿಷ್ಟವೆನಿಸಿವೆ ಕಾರಣ ಕೋಲಾರ ಜಿಲ್ಲೆಯ ದಿಂಬಿನಾಕಾರದ ಶಿಲೆಗಳು, ಬೆಂಗಳೂರು ಲಾಲ್‌ಬಾಗಿನ ಪೆನಿನ್ಸುಲಾರ್‌ನೈಸ್‌ಶಿಲೆ, ಮದ್ರಾಸಿನ ಸೇಂಟ್‌ಥಾಮಸ್‌ಗುಡ್ಡದ ಚಾರ‍್ನೋಕೈಟ್‌ಶಿಲೆಗಳು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕಗಳೆಂದು ಘೋಷಿಲ್ಪಟ್ಟಿವೆ.
ಸುಮಾರು ೨.೫ ಕೋಟಿ ವರ್ಷಗಳಷ್ಟು ಹಳೆಯದೆಂದು ಈ ಗುಡ್ಡವನ್ನು ಭೂಗರ್ಭ ಶಾಸ್ತ್ರಜ್ಞರು ಅಂದಾಜಿಸುತ್ತಾರೆ. ಬಹಳ ಹಿಂದಿನ ಕಾಲದಿಂದಲು ಭೂಮಿ ಮೇಲೆ ಅಷ್ಟೇ ಅಲ್ಲದೆ ಸಾಗರದ ತಳದಲ್ಲು ಜ್ವಾಲಾಮುಖಿಗಳು ಲಾವಾರಸವನ್ನು ಕಾರುತ್ತಿದ್ದವು. ತಣ್ಣಗಾಗಿ ಘನರೂಪವನ್ನು ಪಡೆದು ಶಿಲೆಗಳಾದವು ಇದರಿಂದ ನಾವಿಂದು ಜೀವಿಸುವ ಈ ನೆಲ ಒಂದಾನೊಂದು ಕಾಲದಲ್ಲಿ ಸಾಗರದ ತಳವಾಗಿತ್ತು ಎಂಬುವುದು ಅಚ್ಚರಿಯ ವಿಷಯವಾಗಿದೆ. ಈ ಶಿಲೆಯ ಅಡ್ಡಸೀಳಿಕೆಯಲ್ಲಿ ಕಾಣಿಸುವ ಎಲ್ಲಾ ರಚನೆಗಳು ಇದನ್ನು ನೈಸರ್ಗಿಕ ವಿಸ್ಮಯವನ್ನಾಗಿಸಿವೆ.

*********************************************************
ವಲಯ ಕೃಷಿ ಸಂಶೋದನಾ ಕೇಂದ್ರಬಬ್ಬೂರು
ಬಬ್ಬೂರು ಕೃಷಿ ಸಂಶೋಧನಾ ಕೇಂದ್ರವು ೧೯೧೬ರಲ್ಲಿ ಕಬ್ಬು, ಭತ್ತ ಮತ್ತು ವಾಣಿವಿಲಾಸ ಅಚ್ಚುಕಟ್ಟು ಪ್ರದೇಶದಲ್ಲಿನ ಮಣ್ಣು ಮತ್ತು ನೀರಿನ ನಿರ್ವಹಣೆಯ ಬಗ್ಗೆ ಪ್ರಸ್ತಾಪಿಸುವ ಮುಖ್ಯ ಧ್ಯೇಯೋದ್ದೇಶಗಳೊಂದಿಗೆ ಸ್ಥಾಪಿಸಲ್ಪಟ್ಟು ಹಂತ ಹಂತವಾಗಿ ಮಾರ್ಪಾಡು ಹೊಂದಿ ವಲಯ ಕೃಷಿ ಸಂಶೋಧನಾ ಕೇಂದ್ರವಾಗಿದೆ. ಒಟ್ಟು ೭೧ ಹೆಕ್ಟೇರ್‌ಭೂಮಿ ಇದ್ದು ಹಿರಿಯೂರು ನಗರದಿಂದ ೫ ಕಿ.ಮೀ. ದೂರದಲ್ಲಿದೆ.
ಕೃಷಿ ವಿಜ್ಞಾನ ಕೇಂದ್ರದ ಕಟ್ಟಡವೂ ಸೇರಿದಂತೆ ಅಂಜೂರ, ಮೋಸಂಬಿ, ದಾಳಿಂಬೆ, ಔಷಧಿ ಹಾಗೂ ಸುಗಂಧ ದ್ರವ್ಯ, ಮೇವಿನ ಬೆಳೆಗಳು, ಜತ್ರೋಪ ಪ್ರಯೋಗ, ತೆಂಗು, ಸಪೋಟ, ಮಾವು, ಅಡಿಕೆ, ಭತ್ತ, ಬೀಜೋತ್ಪಾದನೆ, ನೇರಳೆ ಹೀಗೆ ಒಟ್ಟು ೫೮.೭೦ ಹೆಕ್ಟೇರ್‌ಪ್ರದೇಶದಲ್ಲಿ ವಿವಿಧ ರೀತಿಯ ಪ್ರಯೋಗ, ಸಂಶೋಧನೆಗೆ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಈ ವಲಯದ ಮುಖ್ಯ ಬೆಲೆಗಳಾದ ದ್ವಿದಳ ಧಾನ್ಯಗಳು ಮತ್ತು ವಾಣಿಜ್ಯ ಬೆಳೆಗಳ ಮೇಲೆ ಸಂಶೋಧನಾ ಕಾರ್ಯ ಮುಂದುವರಿದಿದೆ.
ಹರಳಿನ (ಔಡಲ) ತಳಿಗಳಾದ ರೋಜಿ ಮ್ತು ಎಂ.ಸಿ.-೧, ಡಿ.ಸಿ.ಎಸ್‌.-೯, ಡಿ.ಸಿ.ಎಚ್‌.ಎಫ್‌.-೨, ಹಿಂಗಾರು ಜೋಳದ ತಳಿ ಎಂ.ಜಿ.ಎಸ್‌.-೧, ಡಿ.ಹೆಚ್‌.ಬಿ ೧೦೫ ಹತ್ತಿ ತಳಿ, ರಾಗಿ ತಳಿಯಾದ ಜಿ.ಪಿ.ಯು-೪೮, ಜೆ.ಜಿ.-೧೧, ಕಡಲೆ ತಳಿ, ಮುಸಕಿನ ಜೋಳದ ಎನ್‌.ಹೆಚ್‌.-೨೦೪೯, ಸೂರ್ಯಕಾಂತಿಯ ಕೆ.ಬಿ.ಎಸ್‌.ಹೆಚ್‌.-೫೩, ಎಂ.ಎನ್‌.-೨೬ ಎನ್ನುವ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಿದೆ.
ವಿಸ್ತರಣಾ ಕಾರ್ಯಕ್ರಮಗಳು
ಸಮಗ್ರ ಕೃಷಿ ಹವಾಮಾನ ಸಲಹಾ ಸೇವೆ, ನೀರು ಮತ್ತು ಮಣ್ಣಿನ ಗುಣಗಳ ಪರೀಕ್ಷೆ, ಸಾವಯವ ಕೃಷಿ ವಿಧಾನ ಅಳವಡಿಕೆ, ಕೃಷಿ ವಿಜ್ಞಾನ ಕೇಂದ್ರ ಮತ್ತು ಜಿಲ್ಲಾ ತರಬೇತಿ ಕೇಂದ್ರಗಳಲ್ಲಿ ರೈತರಿಗೆ ಪ್ರಾತ್ಯಕ್ಷಿಕೆಗಳು ಮತ್ತ ತರಬೇತಿಯನ್ನು ಯಶಸ್ವಿಯಾಗಿ ಏರ್ಪಡಿಸುತ್ತಿದ್ದಾರೆ. ಹಣ್ಣಿನ ಬೆಳೆಗಳಾದ ಮಾವು, ಸಪೋಟ, ಅಂಜೂರ, ತೆಂಗು, ಅಡಿಕೆ ಮತ್ತು ಹೂವಿನ ಗಿಡಗಳ ಸಸ್ಯಾಭಿವೃದ್ಧಿ ಮಾಡಿ ರೈತರು ಮತ್ತು ಅಪೇಕ್ಷಿಸಿದವರಿಗೆ ನೀಡುತ್ತಿದೆ. ಕೃಷಿ ವಿಜ್ಞಾನಿಗಳು ರೈತರ ಜಮೀನಿಗೆ ಭೇಟಿ ಮಾಡುವುದರ ಜೊತೆಗೆ ನೇರವಾಗಿ ಹಾಗೂ ರೇಡಿಯೋ, ದೂರದರ್ಶನದ ಮೂಲಕ ಸೂಕ್ತ ಸಲಹೆಗಳನ್ನು ಬಿತ್ತರಿಸುತ್ತಿದ್ದಾರೆ.

*********************************************************
ಒಂಟಿ ಕಂಬದ ಮಠ
ತಲುಪುವುದು ಹೇಗೆ ?
ಹೊಳಲ್ಕೆರೆ-ಚಿತ್ರದುರ್ಗ ರಸ್ತೆ
ರಾ.ಹೆ. ಸಂಖ್ಯೆ-೧೩ರಲ್ಲಿ ಇದೆ.
ದೂರ
ಜಿಲ್ಲಾ ಕೇಂದ್ರದಿಂದ: ೩೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೨ ಕಿ.ಮೀ.
ಹೊಳಲ್ಕೆರೆ ಪಟ್ಟಣದ ಚಿತ್ರದುರ್ಗ ರಸ್ತೆಯಲ್ಲಿ ಕಾಣುವ ಒಂಟಿ ಕಂಬದ ಮಠವು ವಾಸ್ತುಶಿಲ್ಪದ ಅಚ್ಚರಿಯೇ ಸರಿ. ಸುಮಾರು ೩೦೦ ವರ್ಷಗಳ ಹಿಂದೆ ಸ್ವಾಮೀಜಿ ಒಬ್ಬರು ಇದೇ ಮಾರ್ಗವಾಗಿ ಯಡಿಯೂರು ಕ್ಷೇತ್ರಕ್ಕೆ ಹೋಗುತ್ತಿದ್ದರಂತೆ, ಮಾರ್ಗ ಮಧ್ಯದಲ್ಲಿ ಅನಾರೋಗ್ಯ ಪೀಡಿತರಾಗಿ ಕೆಲದಿನಗಳ ಕಾಲ ಇಲ್ಲಿಯೇ ಉಳಿದು ಸ್ಥಳೀಯರ ಆದರವನ್ನು ಗಳಿಸಿದರು. ಭಕ್ತರು ಸ್ವಾಮೀಜಿಗೆ ಮಠವೊಂದನ್ನು ಕಟ್ಟುವ ಬಯಕೆ ತೋರಿದಾಗ ಹುಟ್ಟು ಸಾವುಗಳು ಒಂಟಿ, ನನಗೆ ಮಠ ಕಟ್ಟುವುದಾದರೆ ಒಂಟಿ ಕಂಬದ ಮೇಲೆ ಕಟ್ಟಿ ಎಂದರಂತೆ. ಅದೇ ಪ್ರಕಾರ ಈ ಒಂಟಿ ಕಂಬದ ಮಠ ನಿರ್ಮಾಣವಾಗಿದೆ. ಹಾಳು ಬಿದ್ದ ಈ ಮಠವನ್ನು ಮಲ್ಲಿಕಾರ್ಜುನ ಮುರುಘಾ ಶರಣರು ಗಮನ ಹರಿಸಿ ಅಭಿವೃದ್ಧಿಪಡಿಸಿದರು. ಇಲ್ಲಿನ ಪರಿಸರಕ್ಕೆ ಮನಸೋತು ಇಲ್ಲಿಯೇ ಲಿಂಗೈಕ್ಯರಾದರು.

*********************************************************
ಬಯಲು ಗಣಪತಿ 
ತಲುಪುವುದು ಹೇಗೆ ?ಹೊಳಲ್ಕೆರೆ ನಗರದಲ್ಲಿದೆ.
ದೂರ
ಜಿಲ್ಲಾ ಕೇಂದ್ರದಿಂದ: ೩೦ ಕಿ.ಮೀ.
ಹೊಳಲ್ಕೆರೆ ಪಟ್ಟಣದ ಮಧ್ಯಭಾಗದಲ್ಲಿರುವ ಒಂಭತ್ತು ಅಡಿ ಎತ್ತರದ ಏಕಶಿಲಾ ಮೂರ್ತಿಯನ್ನು ಕ್ರಿ.ಶ. ೧೫೭೦ರಲ್ಲಿ ಕಾಮಗೇತಿ ಮದಕರಿ ನಾಯಕನ ಮೈದುನ ಗುತ್ಯಪ್ಪ ನಾಯಕನ ಕಾಲದಲ್ಲಿ ನಿರ್ಮಾಣವಾಯಿತು. ಆಗ ವಿಗ್ರಹ ಬಯಲಿನಲ್ಲಿ ಇದ್ದುದರಿಂದ ಇದನ್ನು ಬಯಲು ಗಣಪತಿ ಎಂದು ಕರೆಯಲಾಗುತ್ತಿತ್ತು. ಇತ್ತೀಚಿಗೆ ದೇವಾಲಯವನ್ನು ನಿರ್ಮಿಸಲಾಗಿದೆ. ಮೂರ್ತಿ ಹಿಂಭಾಗದಲ್ಲಿ ಜಡೆ ಕೆತ್ತನೆ ಇರುವುದರಿಂದ ಇದನ್ನು ಜಡೆ ಗಣಪತಿ ಎಂದೂ ಕರೆಯುತ್ತಾರೆ.

*********************************************************
ಹೊರಕೆರೆದೇವಪುರದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯ
ತಲುಪುವುದು ಹೇಗೆ ?ಹೊಳಲ್ಕೆರೆ-ಚಿತ್ರದುರ್ಗ ರಸ್ತೆ, ರಾ.ಹೆ.
ಸಂಖ್ಯೆ-೧೩ರಲ್ಲಿ ಚಿತ್ರಹಳ್ಳಿಯಿಂದ ೧೨ ಕಿ.ಮೀ. ದೂರದಲ್ಲಿದೆ.
ದೂರ
ಜಿಲ್ಲಾ ಕೇಂದ್ರದಿಂದ: ೨೭ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೨೫ ಕಿ.ಮೀ.
ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆದೇವಪುರ ಒಂದು ಪ್ರಸಿದ್ಧ ವೈಷ್ಣವ ಕ್ಷೇತ್ರ. ಇಲ್ಲಿನ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯ ವಿಜಯನಗರ ಕಾಲದ ವಿಶಿಷ್ಟ ಶಿಲ್ಪ ಶೈಲಿಯ ಮಹಾದ್ವಾರ ಗೋಪುರದಿಂದ ಪ್ರವಾಸಿಗರ ಗಮನ ಸೆಳೆಯುತ್ತದೆ. ಊರಿನ ಹೊರ ಭಾಗದಲ್ಲಿರುವ ಕೆರೆಯ ಹುತ್ತದಲ್ಲಿ ಭಗವಂತ ನೆಲೆಸಿದ್ದರಿಂದ ಇದಕ್ಕೆ ಹೊರಕೆರೆದೇವಪುರ ಎಂದು ಕರೆಯಲಾಗುತ್ತಿದೆ. ಈ ದೇವಾಲಯದ ನಿರ್ಮಾಣದ ಬಗ್ಗೆ ನಿಖರ ಮಾಹಿತಿ ಇಲ್ಲದಿದ್ದರೂ ಕ್ರಿ.ಶ. ೧೩೪೮ರಲ್ಲಿ ದುಮ್ಮಿ ವೀರಪ್ಪನಾಯಕ ದೇವಾಲಯದ ಗರ್ಭಗುಡಿಯನ್ನು ನಿರ್ಮಿಸಿದರನು ನಂತರ ಇದು ಅಭಿವೃದ್ಧಿ ಹೊಂದಿತು ಎಂದು ನಂಬಲಾಗಿದೆ. ಈ ದೇವಾಲಯದಲ್ಲಿ ಅನೇಕ ಹೆಸರಾಂತ ಚಲನಚಿತ್ರಗಳನ್ನು ನಿರ್ಮಿಸಲಾಗಿದೆ.

*********************************************************
ಹೆಗ್ಗೆರೆಯ ಜೈನಬಸದಿ
ತಲುಪುವುದು ಹೇಗೆ ?ಹೊಸದುರ್ಗ-ಶ್ರೀರಾಂಪುರ ಮಾರ್ಗದಲ್ಲಿದೆ.
ದೂರ
ಜಿಲ್ಲಾ ಕೇಂದ್ರದಿಂದ: ೮೮ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೨೮ ಕಿ.ಮೀ.
ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆಯ ಜೈನಬಸದಿ ಹೊಯ್ಸಳರ ಕಾಲದ ಅಮೋಘ ಶಿಲ್ಪಕಲೆಯ ಶಿವಾಲಯ-ಜಿನಾಲಯ ಹೊಂದಿರುವ ಪುಟ್ಟ ಗ್ರಾಮವಾಗಿದೆ. ಕ್ರಿ.ಶ. ೧೫ನೇ ಶತಮಾನದಲ್ಲಿ ಬೂದಿಹಾಳು ಸೀಮೆಗೆ ಸೇರಿದ್ದು. ಆಂಗ್ಲರ ಕಾಲದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸೇರಿದ್ದು ಈಗ ಹೊಸದುರ್ಗ ತಾಲ್ಲೂಕಿನಲ್ಲಿದೆ. ಇತಿಹಾಸದ ಪುಟಗಳಲ್ಲಿ ಸಂಪದ್ಭರಿತ ನಗರವೆಂದು ವರ್ಣಿಸಲ್ಪಟ್ಟಿರುವ ಹೆಗ್ಗೆರೆಯಲ್ಲಿ ಚಾಲುಕ್ಯರ ಮತ್ತು ಹೊಯ್ಸಳರ ಕಾಲದ ಅವಶೇಷಗಳು ಮತ್ತು ಶಾಸನಗಳು ದೊರೆತಿವೆ. ಸಾಧಾರಣವಾಗಿ ಕಾಣುವ ಶಿವಾಲಯದ ಒಳಗೆ ಅಪರೂಪದ ಕಲಾಕೃತಿಗಳು, ಬೃಹತ್‌ನಂದಿ, ಶಿವಲಿಂಗ ನೋಡುಗರನ್ನು ಸೆಳೆಯುತ್ತವೆ.
ಹೆಗ್ಗೆರೆಯ ಜೈನಬಸದಿ ಸುಂದರ ಕೆತ್ತನೆಯನ್ನು ಹೊಂದಿದ್ದು ಕ್ರಿ.ಶ. ೧೧೬೦ರಲ್ಲಿ ನಿರ್ಮಾಣವಾಗಿರುವ ಬಗ್ಗೆ ಬಸದಿಯ ಮುಂಭಾಗದ ಶಾಸನದಿಂದ ತಿಳಿದುಬರುತ್ತದೆ.
 *********************************************************

ಅಶೋಕನ ಬಂಡೆ ಶಿಲಾಶಾಸನ
ತಲುಪುವುದು ಹೇಗೆ ?ಚಳ್ಳಕೆರೆ-ಬಳ್ಳಾರಿ ರಸ್ತೆ, ರಾಜ್ಯ ಹೆದ್ದಾರಿ ಸಂಖ್ಯೆ-೧೯ರಲ್ಲಿ
ಸಿದ್ದಾಪುರ ಕ್ರಾಸ್‌ನಿಂದ ೫ ಕಿ.ಮೀ. ಇದೆ.
ದೂರ
ಜಿಲ್ಲಾ ಕೇಂದ್ರದಿಂದ: ೯೩ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೨೫ ಕಿ.ಮೀ.
ಕ್ರಿ.ಪೂ. ೩ನೇ ಶತಮಾನದ ಮೌರ್ಯ ಸಾಮ್ರಾಟ ಅಶೋಕ ಚಕ್ರವರ್ತಿಯಿಂದ ರಚಿಸಲ್ಪಟ್ಟಿರುವ ಮೊಳಕಾಲ್ಮುರು ತಾಲ್ಲೂಕಿನ ಬ್ರಹ್ಮಗಿರಿ ಬೆಟ್ಟದ ಬುಡದ ಬೃಹತ್‌ಬಂಡೆಯ ಮೇಲಿರುವ ಶಿಲಾಶಾಸನ. ಇದ ಬ್ರಹ್ಮಲಿಪಿಯಲ್ಲಿದ್ದು, ಕಲ್ಲುಬಂಡೆಯ ಮೇಲೆ ಕೆತ್ತಲಾಗಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ೨೫೯೫ ಅಡಿ ಎತ್ತರದಲ್ಲಿದೆ. ಪಕ್ಕದಲ್ಲಿ ಸಿದ್ದೇಶ್ವರ ದೇವಾಲಯವಿದ್ದು ಪ್ರತಿ ಅಮಾವಾಸ್ಯೆಯ ದಿನ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆತು ವಿಶೇಷ ಪೂಜೆಯನ್ನು ಸಲ್ಲಿಸುವುದು ವಾಡಿಕೆಯಲ್ಲಿದೆ.
 *********************************************************

ಶ್ರೀ ಜಟಂಗಿ ರಾಮೇಶ್ವರ ದೇವಾಲಯ
ತಲುಪುವುದು ಹೇಗೆ ?ಚಳ್ಳಕೆರೆ-ಬಳ್ಳಾರಿ ರಸ್ತೆ, ರಾಜ್ಯ ಹೆದ್ದಾರಿ ಸಂಖ್ಯೆ-೧೯ರಲ್ಲಿ
ರಾಂಪುರ-ದೇವಸಮುದ್ರದ ಮಧ್ಯೆ ಇದೆ.
ದೂರ
ಜಿಲ್ಲಾ ಕೇಂದ್ರದಿಂದ: ೧೦೧ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೩೦ ಕಿ.ಮೀ.
ಮೊಳಕಾಲ್ಮುರು ತಾಲ್ಲೂಕಿನ ದೇವಸಮುದ್ರದ ಹತ್ತಿರದ ಜಟಂಗಿ ರಾಮೇಶ್ವರ ಬೆಟ್ಟದ ಮೇಲಿರುವ ಈ ದೇವಾಲಯ ಸಮುದ್ರ ಮಟ್ಟದಿಂದ ೩೪೬೯ ಅಡಿ ಎತ್ತರದಲ್ಲಿದೆ.
ಈ ಸ್ಥಳಕ್ಕೆ ಪೌರಾಣಿಕ ಹಿನ್ನೆಲೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಅದೇನೆಂದರೆ ರಾವಣನು ಸೀತಾದೇವಿಯನ್ನು ಅಪಹರಿಸಿ ಲಂಕೆಗೆ ಕೊಂಡೊಯ್ಯುತ್ತಿರುವಾಗ ಅವನನ್ನು ಜಟಾಯು ಪಕ್ಷಿಯು ಎದುರಿಸುತ್ತದೆ. ಆಗ ಹೋರಾಟ ನಡೆದು ರಾವಣನು ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿ ಹಾಕುತ್ತಾನೆ. ಇದರ ಗುರುತುಗಳನ್ನು ಇಂದಿಗೂ ನೋಡಬಹುದು. ಶ್ರೀರಾಮನು ಸೀತೆಯನ್ನು ಹುಡುಕುತ್ತಾ ಬಂದಾಗ ಸೀತಾಪಹರಣದ ವಿಷವನ್ನು ಜಟಾಯುವು ರಾಮನಿಗೆ ತಿಳಿಸಿ ಈ ಸ್ಥಳದಲ್ಲಿ ಶಿವಲಿಂಗವೊಂದನ್ನು ಸ್ಥಾಪಿಸಬೇಕೆಂದು ಕೋರುತ್ತದೆ. ಶಿವಲಿಂಗವನ್ನು ತರಲು ಕಾಶಿಗೆ ಹೋದ ಆಂಜನೇಯ ಬರುವುದು ತಡವಾದ ಕಾರಣ ಬಂಡೆಕಲ್ಲೊಂದರ ಮೇಲಿದ್ದ ಕಲ್ಲನ್ನು ಉದ್ಭವಲಿಂಗವೆಂದು ಭಾವಿಸಲಾಯಿತು. ತಡವಾಗಿ ತಂದ ಲಿಂಗವನ್ನು ಅದೇ ಆವರಣದಲ್ಲಿ ಸ್ಥಾಪಿಸಲಾಯಿತು.
 *********************************************************

ರಂಗಯ್ಯನ ದುರ್ಗ ಜಲಾಶಯ
ತಲುಪುವುದು ಹೇಗೆ ?ಚಳ್ಳಕೆರೆ-ಬಳ್ಳಾರಿ ರಸ್ತೆ, ರಾಜ್ಯ ಹೆದ್ದಾರಿ ಸಂಖ್ಯೆ – ೧೯ರಲ್ಲಿ
ಹಾನಗಲ್‌ನಿಂದ ೫ ಕಿ.ಮೀ. ದೂರದಲ್ಲಿದೆ.
ದೂರ
ಜಿಲ್ಲಾ ಕೇಂದ್ರದಿಂದ: ೮೫ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೮ ಕಿ.ಮೀ.
ಮೊಳಕಾಲ್ಮುರು ತಾಲ್ಲೂಕಿನ ಹಾನಗಲ್‌ಬಳಿ ಚಿನ್ನಹಗರಿ ಹಳ್ಳಕ್ಕೆ ನಿರ್ಮಿಸಲಾಗಿರುವ ಈ ಜಲಾಶಯವು ೧೯೮೯ರಲ್ಲಿ ಪ್ರಾರಂಭವಾಗಿ ೧೯೯೨ರಲ್ಲಿ ಪೂರ್ಣಗೊಂಡಿದೆ. ಬರದ ನಾಡಿನಲ್ಲಿ ನಿರ್ಮಿಸಲಾಗಿರುವ ಈ ಜಲಾಶಯದ ಬಲದಂಡೆ ನಾಲೆಯು ೧೪ ಕಿ.ಮೀ. ಸಾಗಿ ೨೨೨೬ ಹೆಕ್ಟೇರ್‌ಪ್ರದೇಶಕ್ಕೆ ನೀರುಣಿಸುತ್ತದೆ. ಚಿತ್ರದುರ್ಗದ ಕಡೆಯಿಂದ ಹರಿದು ಬರುವ ಚಿನ್ನಹಗಿರಿ ನದಿಯು ಇಲ್ಲಿ ಪೂರ್ವೋತ್ತರವಾಗಿ ಹರಿದು ಊರನ್ನು ತಬ್ಬಿಕೊಡುವಂತೆ ಸುತ್ತುವರೆದಿದೆ.
 *********************************************************

ನುಂಕಿಮಲೆ
ತಲುಪುವುದು ಹೇಗೆ ?ಚಳ್ಳಕೆರೆ-ಬಳ್ಳಾರಿ ರಸ್ತೆ, ರಾಜ್ಯ ಹೆದ್ದಾರಿ ಸಂಖ್ಯೆ-೧೯ರಲ್ಲಿ
ಕೆಳಗಿನ ಹಟ್ಟಿ ಕ್ರಾಸ್‌ನಿಂದ ೫ ಕಿ.ಮೀ. ದೂರದಲ್ಲಿದೆ.
ದೂರ
ಜಿಲ್ಲಾ ಕೇಂದ್ರದಿಂದ: ೮೩ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೧೩ ಕಿ.ಮೀ.
ಮೊಳಕಾಲ್ಮುರು ನಗರದ ಬದಿಯಲ್ಲಿರುವ ನುಂಕಿಮಲೆ ಆಕರ್ಷಣೆಯ ತಾಣವೇ ಅಲ್ಲದೆ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಸ್ಥಳವಾಗಿದೆ. ನುಂಕವ್ವ, ಮಲಿಯವ್ವ ಎಂಬ ರಕ್ಕಸಿಯರನ್ನು ಸಂಹಾರ ಮಾಡಿದ್ದರಿಂದ ಹಿನ್ನೆಲೆಯಲ್ಲಿ ನುಂಕಿಮಲೆ ಹೆಸರು ಬಂದಿತೆಂದು ಪುರಾಣ ಹೇಳುತ್ತದೆ.
ಕದಂಬರ, ಅಜವರ್ಮ ಮಹಾರಾಜನ ಕಾಲದಲ್ಲಿ ನಿರ್ಮಿಸಲಾದ ಮಲ್ಲಿಕಾರ್ಜುನ ದೇವಾಲಯದಲ್ಲಿ ಒಂದು ಪುರಾತನ ಶಾಸನವು ಇದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ೩೦೨೨ ಅಡಿ ಎತ್ತರದಲ್ಲಿರುವ ಇದನ್ನು ದಕ್ಷಿಣ ಕಾಶಿ ಎಂದೂ ಕರೆಯುವರು. ಮಳೆಗಾಲದಲ್ಲಿ ಸಣ್ಣ-ಸಣ್ಣ ಝರಿಗಳು ಹರಿಯುವುದರಿಂದ ನೋಡಲು ಮನೋಹರವಾಗಿರುತ್ತದೆ.
ಹೊಯ್ಸಳರ ಕಾಲದ ಭೈರವೇಶ್ವರ ದೇವಾಲಯ, ಚಿತ್ರದುರ್ಗ ಪಾಳೇಯಗಾರರ ಕಾಲದ ಕೋಟೆ-ಕೊತ್ತಲಗಳ ಅವಶೇಷಗಳು ಹಾಗೂ ಇನ್ನಿತರ ಸಣ್ಣ-ಪುಟ್ಟ ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತವೆ.
*********************************************************


ಕರ್ನಾಟಕ ರಾಜ್ಯವು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದ ರಾಜ್ಯ. ನೂರಾರು ಪ್ರೇಕ್ಷಣೀಯ ಸ್ಥಳಗಳಿಂದ ಕೂಡಿರುವ ಚಿತ್ರದುರ್ಗ ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲೊಂದು. ಇಂದು ಜಿಲ್ಲಾ ಕೇಂದ್ರವಾಗಿದ್ದು ಇತಿಹಾಸ, ರಾಜಕೀಯ ಭೌಗೋಳಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕವಾಗಿ ಬಹುದೊಡ್ಡ ಪರಂಪರೆಯನ್ನು ಹೊಂದಿದೆ. ಹಾಗೆಯೇ ಪ್ರಾಚೀನ ಶಾಸನಗಳ, ಪುಣ್ಯಪಾವನ ಕ್ಷೇತ್ರಗಳು, ಕೋಟೆಕೊತ್ತಲಗಳ ತವರೂರೆನಿಸಿದೆ.
ಚಿತ್ರದುರ್ಗವು ಸಮುದ್ರಮಟ್ಟದಿಂದ ಸು.೮೫೪ ಮೀಟರನ್‌ನಷ್ಟು ಎತ್ತರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ-೪ (ಬೆಂಗಳೂರು-ಪೂನಾ) ಹಾಗೂ ರಾಷ್ಟ್ರೀಯ ಹೆದ್ದಾರಿ-೧೩ (ಚಿತ್ರದುರ್ಗ-ಸೊಲ್ಲಾಪುರ) ರ ಸಂಗಮ ಸ್ಥಳವಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ವಾಯುವ್ಯಕ್ಕೆ ೨೦೦ ಕಿ.ಮೀ. ದೂರದಲ್ಲಿರುವ ಜಿಲ್ಲಾ ಕೇಂದ್ರವಾಗಿದೆ. ಇದು ೮,೩೮೮ ಚ.ಕಿ.ಮೀ. ವಿಸ್ತೀರ್ಣ ಹೊಂದಿ ಕರ್ನಾಟಕದ ೯ನೇ ದೊಡ್ಡ ಜಿಲ್ಲೆ ಎಂಬ ಖ್ಯಾತಿ ಪಡೆದಿದೆ. ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ಎಂಬ ೬ ತಾಲ್ಲೂಕುಗಳನ್ನು ಒಳಗೊಂಡಿದ್ದು ೨೦೦೧ ರ ಜನಗಣತಿ ಪ್ರಕಾರ ೧೫,೧೭,೮೯೬ ಜನಸಂಖ್ಯೆಯಿಂದಾಗಿ ೧೭೯/ಚ.ಕಿ.ಮೀ. ಜನಸಾಂದ್ರತೆ ಹೊಂದಿದೆ. ೬೪.೫% ಸಾಕ್ಷರತೆ ಪ್ರಮಾಣ ಸಾಧಿಸಿದೆ. ೭೩,೭೧೩ ಹೆಕ್ಟೇರ್‌ಅರಣ್ಯಭೂಮಿಯ ನೈಸರ್ಗಿಕ ಸಂಪತ್ತು ಹೊಂದಿದೆ.
ಈ ಹಿಂದೆ ಚಿತ್ರದುರ್ಗವು ಹಿಡಿಂಬನ ರಾಜಧಾನಿಯಾಗಿತ್ತೆಂದು ಕ್ರಿ.ಶ. ೩ನೇ ಶತಮಾನದ ‘ಮಯೂರವರ್ಮನ’ ಶಾಸನದ ಪ್ರಕಾರ ಶಾತವಾಹನರು, ಕದಂಬರು ಆಳಿದ್ದರು. ತದನಂತರ ಚಾಲುಕ್ಯರು, ಪಲ್ಲವರು, ರಾಷ್ಟ್ರಕೂಟರು, ಚೋಳರು, ಹೊಯ್ಸಳರು ವಿಜಯನಗರದ ಅರಸರ ಆಳ್ವಿಕೆಗೆ ಒಳಪಟ್ಟಿತ್ತೆಂತಳೂ, ಪಾಳೆಯಗಾರರು ಕ್ರಿ.ಶ. ೧೫೬೮ರಿಂದ ೧೭೭೭ರವರೆಗೆ ಸು.೨೧೧ ವರ್ಷಗಳ ಕಾಲ ರಾಜ್ಯ ಆಳ್ವಿಕೆ ಮಾಡಿದ್ದರು. ಕಾಮಗೇತಿ ವಂಶದ ಮೂಲಪುರುಷ ಚಿತ್ರನಾಯಕನಿಂದ ಆರಂಭವಾಗಿ ರಾಜವೀರ ಮದಕರಿನಾಯಕನ ಕಾಲದವರೆಗೆ ಚಿತ್ರದುರ್ಗವು ಪಾಳೆಯಗಾರರ ಆಳ್ವಿಕೆಯಲ್ಲಿ ಪಾಳೆಪಟ್ಟಾಗಿದ್ದಿತು. ಮದಕರಿನಾಯಕನ ಕಾಲದಲ್ಲಿ ಹೈದರಾಲಿಯ ಸೈನಿಕರು ಕೋಟೆಗೆ ಮುತ್ತಿಗೆ ಹಾಕಿದಾಗ ವೀರಾವೇಶದಿಂದ ಗಂಡುಗಚ್ಚೆ ಕಟ್ಟಿ ಒನಕೆ ಹಿಡಿದು ಶತ್ರುಗಳೊಡನೆ ಸೆಣಸಿದ ಮಹಿಳೆ ‘ವೀರವನಿತೆ’ ಓಬವ್ವಳೆಂಬ’ ಖ್ಯಾತಿಗೆ ಪಾತ್ರಳಾದಳು. ೧೭೭೯ರಲ್ಲಿ ಕೋಟೆ ಹೈದರಾಲಿಯ ವಶವಾಗುತ್ತದೆ.
ಚಿತ್ರದುರ್ಗಕ್ಕೆ ದ್ವಾಪರದಲ್ಲಿ ‘ಹಿಡಿಂಬಪಟ್ಟಣ’, ಕದಂಬರ ಕಾಲದಲ್ಲಿ ‘ಚಂದ್ರವಳ್ಳಿ’, ಚಾಲುಕ್ಯರ ಕಾಲದಲ್ಲಿ ‘ಸೂಳ್ಗಲ್ಲು’, ಹೊಯ್ಸಳರ ಕಾಲದಲ್ಲಿ ‘ಪೆರುಮಾಳೆಪುರ’, ವಿಜಯನಗರ ಕಾಲದಲ್ಲಿ ‘ಬೆ(ಚಿ)ಮ್ಮತ್ತನಕಲ್ಲು’, ಪಾಳೆಯಗಾರರ ಕಾಲದಲ್ಲಿ ಛತ್ರಕಲ್‌ದುರ್ಗ, ಚಿತ್ರಕಲ್‌ದುರ್ಗ, ಬ್ರಿಟೀಷರ ಕಾಲದಲ್ಲಿ ‘ಚಿತ್ತಲ್‌ಡ್ರುಗ್‌’ ಆಗಿದ್ದು ಇಂದು ‘ಚಿತ್ರದುರ್ಗ’ ಎಂಬ ಹೆಸರು ಪ್ರಚಲಿತದಲ್ಲಿದೆ.
ಚಿತ್ರದುರ್ಗ ಜಿಲ್ಲೆಯು ಕೋಟೆ-ಕೊತ್ತಲಗಳಿಂದಲೂ, ಮಠಮಾನ್ಯಗಳಿಂದಲೂ, ಶಾಸನಗಳೂ, ಗುಹಾಂತರ ದೇವಾಲಯಗಳಿಂದಲೂ, ಭೂವೈಜ್ಞಾನಿಕ ವಿಸ್ಮಯದ ಸ್ಮಾರಕವಾದ ಮರಡಿಹಳ್ಳಿಯ ‘ದಿಂಬಿನಾಕಾರದ ಶಿಲೆ’ಗಳಿಂದಲೂ (ಪಿಲೊಲಾವ) ೧೩೨೩ ಮೀ ಎತ್ತರದಲ್ಲಿರುವ ಹಸಿರುಡುಗೆಯಟ್ಟು ಕಂಗೊಳಿಸುವ ಜೋಗಿಮಟ್ಟಿ ಗಿರಿಧಾಮದಿಂದಲೂ, ಸಿರಿಗೆರೆ, ಚಿತ್ರದುರ್ಗಗಳಲ್ಲಿರುವ ಮಠ ಮಾನ್ಯಗಳಿಂದಲೂ, ಐತಿಹಾಸಿಕ ಸ್ಮಾರಕಗಳಿಂದಲೂ, ಧಾರ್ಮಿಕ, ಸಾಮಾಜಿಕ ಶೈಕ್ಷಣಿಕವಾಗಿಯೂ ಧರ್ಮ ಸಮನ್ವಯದ ಬೀಡಾಗಿದೆ.
ಹಾಗೆಯೇ ಎಣ್ಣೆಗಿರಣಿಗಳು, ಕಂಬಳಿ ಹಾಗೂ ರೇಷ್ಮೆಯ ಉದ್ದಿಮೆ, ಕುರಿಸಾಕಣೆ ರಾಜ್ಯದ ವ್ಯಾಪಾರ ವಹಿವಾಟಿನಲ್ಲಿ ಪ್ರಮುಖ ಪಾತ್ರವಹಿಸಿವೆ. ಬಯಲುಸೀಮೆಯೆಂಬ ಹಣೆಪಟ್ಟಿಯ ಹೊತ್ತ ಚಿತ್ರದುರ್ಗ ಬೇಸಿಗೆಯ ತಾಪ, ಚಳಿಗಾಲದ ಹಿತಕರ ವಾತಾವರಣದ ಜೊತೆಗೆ ವಾರ್ಷಿಕ ಸರಾಸರಿ ೫೫೫.೭೦ ಮಿ.ಮೀ. ಮಳೆಯ ಪ್ರಮಾಣಕ್ಕೆ ತೃಪ್ತಿಪಟ್ಟುಕೊಂಡಿದೆ. ಇಲ್ಲಿನ ರೈತ ಜನರು ನೆಲಗಡಲೆ, ಸೂರ‍್ಯಕಾಂತಿ, ಹತ್ತಿ, ಮೆಕ್ಕೆಜೋಳ, ತೊಗರಿ, ಭತ್ತ, ಬಾಳೆ, ಅಡಿಕೆ, ತೆಂಗು, ಈರುಳ್ಳಿ, ಹೂವು ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ.
ಚಿತ್ರದುರ್ಗವು ಆದರ್ಶ ರಾಜಕಾರಣಿಯಾಗಿ ಬಾಳಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ|| ಎಸ್‌. ನಿಜಲಿಂಗಪ್ಪನವರ, ‘ಜಾನಪದಸಿರಿ’ ಎಂದು ಹೆಸರಾಗಿದ್ದ ದಿ|| ಸಿರಿಯಜ್ಜಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಪ್ಪಟಗಾಂಧಿವಾದಿ ಬೆಳಗೆರೆ ಕೃಷ್ಣಶಾಸ್ತ್ರಿ, ದುರ್ಗಾಸ್ತಮಾನದ ಕರ್ತೃ ತ.ರಾ.ಸು. ಅವರಂತಹ ಮಹಾನ್‌ಚೇತನಗಳ ಕರ್ಮಭೂಮಿಯೂ ಹೌದು.
ರಾಷ್ಟ್ರಕವಿ ಪದವಿಗೇರಿದ ಕುವೆಂಪು, ಜಿ.ಎಸ್‌. ಶಿವರುದ್ರಪ್ಪ ಇವರುಗಳ ಸ್ಪೂರ್ತಿಯ ಸೆಲೆಯಾಗಿದ್ದ ಗುರುಪರಂಪರೆ ಚಿತ್ರದುರ್ಗ ಜಿಲ್ಲೆಯದು. ಮೊಳಕಾಲ್ಮುರುವಿನ ಅಶೋಕಸಿದ್ದಾಪುರ ಶಾಸನ, ನಾಯಕನಹಟ್ಟಿ ಸಮೀಪದ ರಾಮದುರ್ಗದ ಗುಹಾಂತರದೇವಾಲಯ, ಹೊಳಲ್ಕೆರೆಯ ಒಂಟಿಕಂಬದ ಮಠ ಹಿರಿಯೂರಿನ ಕೃಷಿವಿಜ್ಞಾನ ಕೇಂದ್ರ ಹಾಗೂ ಹೊಸದುರ್ಗದ ಹಾಲರಾಮೇಶ್ವರ ಚಿತ್ರದುರ್ಗದ ಏಳುಸುತ್ತಿನ ಕೋಟೆಯ ವಿಹಂಗಮನೋಟ ಪ್ರವಾಸಿಗರನ್ನು ಸಂಶೋಧಕರನ್ನು ಹುಬ್ಬೇರಿಸುವಂತೆ ಮಾಡಿವೆ. ಗತ ಇತಿಹಾಸ ಸಾರುತ್ತಿವೆ. “ಕನ್ನಡನಾಡಿನ ವೀರರ ರಮಣಿಯ ಗಂಡುಭೂಮಿಯ ವೀರನಾರಿಯ ಚರಿತೆಯ ನಾನು ಹಾಡುವೆ”………. ಎಂದು ಸಾಗುವ ಹಾಡಿನ ಸಾಲುಗಳಿಂದಾಗಿ ಚಿತ್ರದುರ್ಗಕ್ಕೆ ಎಲ್ಲಿಲ್ಲದ ಅಭೂತಪೂರ್ವ ಮಾನ್ಯತೆ ದೊರೆತಿದೆ.
ಈ ಜಿಲ್ಲೆಯು ಬಳ್ಳಾರಿ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು, ಅನಂತಪುರ ಜಿಲ್ಲೆಗಳಿಗೆ ಹೊಂದಿಕೊಂಡು ಭೂ ವಿಸ್ತೀರ್ಣವನ್ನು ಒಳಗೊಂಡಿದೆ. ಉತ್ತಮ ಸಾಂಸ್ಕೃತಿಕ ಬಾಂಧವ್ಯಕ್ಕೆ ಹೆಸರುವಾಸಿಯಾಗಿದೆ.
ಚಿತ್ರದುರ್ಗದ ಜನರು ವಸಂತ ಋತುವಿನಲ್ಲಿ ನೀಲಾಗಸದಡಿಯ ಗಿರಿಸಮೂಹವನ್ನು, ಗ್ರೀಷ್ಮ ಋತುವಿನಲ್ಲಿ ಮೋಡಗಳಿಂದಾವೃತವಾದ, ವರ್ಷ ಮತ್ತು ಶರತ್‌ಋತುವಿನಲ್ಲಿ ಮಳೆಯ ಸಿಂಚನದಿಂದ ಹಸಿರುಟ್ಟುನಿಂತ, ಹೇಮಂತ, ಶಿಶಿರ ಋತುಗಳಲ್ಲಿ ಮುಂಜಾವಿನ ಮಂಜುಮುಸುಕಿದಾಗ ಕೋಟೆ-ಕೊತ್ತಲಗಳ ವಿಹಂಗಮ ನೋಟವನ್ನು ಕಂಡು ಪುನೀತರಾಗುತ್ತಾರೆ, ಪುಳಕಗೊಳ್ಳುತ್ತಾರೆ.
ಈ ಎಲ್ಲಾ ವೈಶಿಷ್ಟ್ಯ ಮತ್ತು ಮಹತ್ವಪೂರ್ಣ ಅಂಶಗಳನ್ನು ತನ್ನ ಮಡಿಲಲ್ಲಿಟ್ಟುಕೊಂಡಿರುವ ಚಿತ್ರದುರ್ಗಕ್ಕೆ ಬಯಲುಸೀಮೆ ಎಂಬ ಹಣೆಪಟ್ಟಿ ಕಳಚಬೇಕಾದರೆ ವರ್ಷಧಾರೆಯಾಗಬೇಕು, ಭದ್ರೆ ಹರಿದು ಬಂದು ಹಸಿರಾಗಿಸಬೇಕೆಂಬ ಹೊಂಗನಸಿದೆ. ಈ ನಾಡಿನ ಗತವೈಭವ ಸಾರುವ ಕೋಟೆ-ಕೊತ್ತಲಗಳೂ, ಗುಡಿಗೋಪುರಗಳು, ಐತಿಹಾಸಿಕ ಸ್ಮಾರಕಗಳು, ಸಾಂಸ್ಕೃತಿಕ ಕೇಂದ್ರಗಳು ಎಲ್ಲಾ ತಾಲ್ಲೂಕುಗಳಲ್ಲೂ ಇದ್ದು ಅವುಗಳ ದರ್ಶನಕ್ಕಾಗಿ ಹೊರಟುನಿಂತವರಿಗೆ ‘ಚಿಣ್ಣರ ಚಿತ್ರದುರ್ಗ ದರ್ಶನ’ ಕೃತಿಯೊಂದು ಕೈಮರವಾಗಿ ನೆರವಾದರೆ ಅದೆಷ್ಟು ಚೆನ್ನ……………
ಐತಿಹಾಸಿಕ ಚಿತ್ರದುರ್ಗದ ಕಲ್ಲಿನಕೋಟೆ
ಚಿತ್ರದುರ್ಗದ ಏಳುಸುತ್ತಿನ ಕಲ್ಲಿನಕೋಟೆಯ ಪ್ರವೇಶದ್ವಾರ. ಈ ಏಳುಸುತ್ತಿನ ಕೋಟೆಯು ತಾಂತ್ರಿಕವಾಗಿ ಅತ್ಯಂತ ಪ್ರಬುದ್ಧವಾಗಿ ನಿರ್ಮಿಸಲ್ಪಟ್ಟಿದೆ, ಫಿರಂಗಿಯಿಂದಲೂ ಇದನ್ನು ಭೇಧಿಸಲು ಸಾಧ್ಯವಿಲ್ಲವೆಂದು ಹೈದರಾಲಿಯೊಂದಿಗೆ ಬಂದಿದ್ದ ಫ್ರೆಂಚ್‌ಸೈನ್ಯಾಧಿಕಾರಿ ಕೌಂಟ್‌ಡಿ-ಲಾಲೆ ಅಭಿಪ್ರಾಯಪಟ್ಟಿದ್ದಾನೆ.
ಚಿತ್ರದುರ್ಗದ ಪಾಳೇಯಗಾರರಲ್ಲೇ ಅತ್ಯಂತ ಪ್ರಸಿದ್ಧನಾದ ದೊರೆ ಮದಕರಿ ನಾಯಕನ ಕಂಚಿನ ಪ್ರತಿಮೆ. ನಗರದ ಹೃದಯ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ.
ತನ್ನ ಶೌರ್ಯ, ಧೈರ್ಯ, ಸ್ವಾಮಿನಿಷ್ಠೆ ಮತ್ತು ಸಮಯಸ್ಪೂರ್ತಿಯಿಂದ ಚಿತ್ರದುರ್ಗದಲ್ಲಿ ಮಾತ್ರವಲ್ಲದೇ ನಾಡಿನಾದ್ಯಂತ ಮನೆಮಾತಾಗಿರುವ ವೀರವನಿತೆ ಒನಕೆ ಓಬವ್ವನ ಪುತ್ಥಳಿ ಜಿಲ್ಲಾಧಿಕಾರಿಯವರ ಕಛೇರಿಯ ಎದುರು ಪ್ರತಿಷ್ಠಾಪಿಸಲಾಗಿದೆ.

ಒಂಟಿಕಲ್ಲು ಬಸವ
ಚಿತ್ರದುರ್ಗ ಕೋಟೆಯ ಒಳಭಾಗದಲ್ಲಿ ನೋಡಬಹುದಾದ ಒಂಟಿಕಲ್ಲು ಬಸವಣ್ಣನ ದೇವಾಲಯ ಶಿಲ್ಪಕಲೆಯ ದೃಷ್ಟಿಯಿಂದ ವಿಶೇಷವಲ್ಲದಿದ್ದರು ಗಮನಸೆಳೆಯುತ್ತದೆ. ಕಾರಣ ಒಂದೆ ಕಲ್ಲಿನಿಂದ ಕೆತ್ತಲಾದ ದೇವಾಲಯ ಇದಾಗಿದೆ.
ಬನಶಂಕರಿ ದೇವಾಲಯ
ಕಲ್ಲುಬಂಡೆಯನ್ನು ಕೊರೆದು ನಿರ್ಮಿಸಲಾದ ಎಣ್ಣೆಕೊಳ

ಮದ್ದುಬೀಸುವ ಕಲ್ಲುಗಳು
ಚಿತ್ರದುರ್ಗದ ಕೋಟೆಗೆ ಪ್ರವೇಶಿಸಿದೊಡನೆಯೆ ಎಡಭಾಗದಲ್ಲಿ ನೋಡಬಹುದಾದ ಸ್ಥಳ, ಹಿಂದೆ ಫಿರಂಗಿಗಳಿಗೆ ಅಗತ್ಯವಾದ ಸಿಡಿಮದ್ದನ್ನು ಆನೆ, ಕುದುರೆಗಳ ಸಹಾಯದಿಂದ ಬೀಸಲಾಗುತ್ತಿತ್ತು.
ದುರ್ಗದ ಇತಿಹಾಸದ ಮೂಕಸಾಕ್ಷಿ !

ಶ್ರೀ ಏಕನಾಥೇಶ್ವರಿ ದೇವಾಲಯ
ಕೋಟೆಯ ಮಧ್ಯಭಾಗದಲ್ಲಿ ಚಿತ್ರದುರ್ಗ ಅರಸರ ಕುಲದೇವತೆ ಏಕನಾಥೇಶ್ವರಿ ದೇವಾಲಯ. ಐತಿಹಾಸಿಕವಾಗಿ ಭಾವನಾತ್ಮಕವಾಗಿ ಏಕನಾಥೇಶ್ವರಿ ಇಂದಿಗೂ ಚಿತ್ರದುರ್ಗ ಜನತೆಗೆ ಸ್ಪೂರ್ತಿಯಾಗಿದ್ದಾಳೆ.
ಕೋಟೆಯ ಮಧ್ಯಭಾಗದಲ್ಲಿ ಏಕನಾಥೇಶ್ವರಿ ದೇವಾಲಯದ ಮುಂದೆ ಓಕುಳಿ ಉತ್ಸವಕ್ಕಾಗಿ ಸಂಪೂರ್ಣ ಗ್ರಾನೈಟ್‌ಕಲ್ಲಿನಿಂದ ನಿರ್ಮಿಸಲಾಗಿರುವ ಪುಷ್ಕರಣಿ

ಠಂಕಸಾಲೆ
ಏಕನಾಥೇಶ್ವರಿ ದೇವಾಲಯದಿಂದ ಪಶ್ಚಿಮಕ್ಕೆ ಮುಂದೆ ಸಾಗಿದರೆ ಮಣ್ಣಿನ ಗೋಡೆಗಳಿಂದ ನಿರ್ಮಾಣವಾಗಿರುವ ಈ ಠಂಕಸಾಲೆ ನಿಮ್ಮ ಗಮನ ಸೆಳೆಯುತ್ತದೆ.
ಶಸ್ತ್ರಾಗಾರ
ಶ್ರೀ ಮುರುಘರಾಜೇಂದ್ರ ಪ್ರಾಚೀನ ಮಠ
ಸಂಪಿಗೆ ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿರುವ ಚಿತ್ರದುರ್ಗ ಪಾಳೇಯಗಾರರ ರಾಜಗುರುಗಳ ಈ ಮಠವು ಹಿಂದೆ ಶ್ರದ್ಧಾಭಕ್ತಿಗಳ ಕೇಂದ್ರವೇ ಅಲ್ಲದೆ ರಾಜತಾಂತ್ರಿಕತೆಯ ಶಿಕ್ಷಣಕೇಂದ್ರವೂ ಆಗಿತ್ತು.
ವಾಸ್ತುಶಿಲ್ಪ ದೃಷ್ಟಿಯಿಂದಲೂ ನಿರ್ಮಾಣ ಕೌಶಲದ ದೃಷ್ಟಿಯಿಂದ ವಿಶಾಲವಾದ ಪ್ರಾಂಗಣ ಹೊಂದಿರುವ ಮುರುಘಾ ಮಠದ ಒಳನೋಟ
ಸಂಪಿಗೆ ಸಿದ್ದೇಶ್ವರ ದೇವಾಲಯ
ಅತ್ಯಂತ ಕಠಿಣವಾದ ಗ್ರಾನೈಟ್‌ಹಾಗೂ ಅಚ್ಚುಗಾರೆಯಿಂದ ನಿರ್ಮಿಸಲಾಗಿರುವ ಈ ದೇವಾಲಯ ಕೋಟೆಯ ಮಧ್ಯದ ಆಕರ್ಷಣೆಗಳಲ್ಲಿ ಒಂದು.
ಸಂಪಿಗೆ ಸಿದ್ದೇಶ್ವರ ದೇವಾಲಯದ ಒಳಗಿನ ಗಾರೆಶಿಲ್ಪಗಳು ಹಾಗೂ ವಿಶಾಲವಾದ ಅಂಗಳ

ಚಿತ್ರದುರ್ಗದ ಕೋಟೆಯ ದೃಶ್ಯಾವಳಿಯ ವಿಹಂಗಮ ನೋಟ
ಚಿತ್ರದುರ್ಗದ ಕೋಟೆಯ ಮೇಲೆ ನೋಡಬಹುದಾದ ಪ್ರವಾಸಿ ಆಕರ್ಷಣೆಗಳೆಂದರೆ ಗಾಳಿಮಂಟಪ, ಉಯ್ಯಾಲೆ ಕಂಬ, ಮುರುಘಾಮಠ, ಆನೆ-ಕುದುರೆ ಹೆಜ್ಜೆಗಳು, ಎಣ್ಣೆಕೊಳ, ತುಪ್ಪದಕೊಳ, ಪಾಳುಬಿದ್ದ ಅರಮನೆ, ಗೋಪಾಲಸ್ವಾಮಿ ಹೊಂಡ, ಏಕನಾಥೇಶ್ವರಿ, ಹಿಡಿಂಬೇಶ್ವರ, ಸಂಪಿಗೆ ಸಿದ್ದೇಶ್ವರ, ಒಂಟಿಕಲ್ಲು ಬಸವ, ಬನಶಂಕರಿ, ಗಣಪತಿ, ಗೋಪಾಲಸ್ವಾಮಿ, ಆಂಜನೇಯಸ್ವಾಮಿ ದೇವಾಲಯಗಳು, ಬತೇರಿ ಮತ್ತು ಕಾವಲು ಗೋಪುರಗಳು, ಒನಕೆ ಓಬವ್ವನ ಕಿಂಡಿ ಇವು ಪ್ರಮುಖವಾದರೆ ಇನ್ನು ಹಲವಾರು ಚಿಕ್ಕಪುಟ್ಟ ಅಂಶಗಳು ಸೇರಿವೆ.

ಗೋಪಾಲಸ್ವಾಮಿ ಹೊಂಡ
ಮೇಲುದುರ್ಗಕ್ಕೆ (ಕೋಟೆಯ ಒಳಭಾಗ) ನೀರಿನ ಮೂಲವಾದ ಐತಿಹಾಸಿಕ ಗೋಪಾಲಸ್ವಾಮಿ ಹೊಂಡ. ಈ ಹೊಂಡ ಬೆಟ್ಟದ ಮೇಲಿದ್ದರೂ ಎಂದೂ ನೀರು ಬತ್ತದಿರುವುದು ವಿಶೇಷ.
ಬತೇರಿಗೆ ಹೋಗುವ ಮೆಟ್ಟಿಲು

ಗೋಪಾಲಸ್ವಾಮಿ ದೇವಾಲಯ
ವಿಶಾಲವಾದ ಜಗಲಿಯ ಮೇಲೆ ಗ್ರಾನೈಟ್‌ಕಲ್ಲು ಹಾಗೂ ಗಾರೆಯಿಂದ ನಿರ್ಮಾಣವಾಗಿರುವ ಗೋಪಾಲಸ್ವಾಮಿ ದೇವಾಲಯ ಕೋಟೆಯೊಳಗಿನ ಮುಖ್ಯವಾದ ದೇವಾಲಯಗಳಲ್ಲಿ ಒಂದಗಿದೆ. ಹೊಂಡದ ಎದುರಿಗಿರುವ ಈ ದೇವಾಲಯ ಪೂರ್ವಾಭಿಮುಖವಾಗಿದೆ.

ಗೋಪಾಲಸ್ವಾಮಿ ಉತ್ಸವಮೂರ್ತಿ

ಅಕ್ಕ-ತಂಗಿ ಹೊಂಡ
ಗೋಪಾಲಸ್ವಾಮಿ ಹೊಂಡದ ದಾರಿಯಲ್ಲಿ ಸಿಗುವ ಅಕ್ಕ-ತಂಗಿ ಜೋಡಿ ಹೊಂಡ.
ತಂಗಿ ಹೊಂಡದ ಬದಿಯಲ್ಲಿಯೇ ಸಿವ ಹಾಗೂ ಆಂಜನೇಯನ ದೇವಾಲಯಗಳ ನೋಟ

ತಣ್ಣೀರು ದೊಣೆ
ವರ್ಷದ ಎಲ್ಲಾ ದಿನಗಳಲ್ಲಿಯೂ ತಂಪಾದ ಸಿಹಿನೀರಿನ ಮೂಲ. ಕೋಟೆಯ ಎಲ್ಲಾ ಸ್ಥಳಗಳನ್ನು ನೋಡಿದ ದಣಿದ ಪ್ರವಾಸಿಗರ ತೃಷೆಯನ್ನು ಶತಮಾನಗಳಿಂದ ತಣಿಸುತ್ತಿದೆ ಈ ತಣ್ಣೀರುದೊಣೆ.
ಒನಕೆ ಓಬವ್ವನ ಕಿಂಡಿಯ ಬಳಿಯ ಆಂಜನೇಯಸ್ವಾಮಿಯ ದೇವಾಲಯ

ಒನಕೆ ಓಬವ್ವನ ಕಿಂಡಿ
ಚಿತ್ರದುರ್ಗದ ಕೋಟೆಯ ವಾಯುವ್ಯ ದಿಕ್ಕಿನಲ್ಲಿ ಕಾಣುವ ಈ ಸ್ಥಳ ಬಹಳ ವಿಶಿಷ್ಟವಾದದ್ದು, ಹೈದರಾಲಿಯು ಚಿತ್ರದುರ್ಗದ ಕೋಟೆಯನ್ನು ಮುತ್ತಿದಾಗ ಗತ್ಯಂತರವಿಲ್ಲದೆ ಈ ಗುಪ್ತದ್ವಾರದ ಮುಖಾಂತರ ಸೈನಿಕರು ಕೋಟೆಯನ್ನು ಪ್ರವೇಶಿಸಲು ಪ್ರಯತ್ನ ಮಾಡುತ್ತಾರೆ, ಕಾವಲುಗಾರನ ಹೆಂಡತಿ ಓಬವ್ವ ಕಿಂಡಿಯಿಂದ ನುಸುಳುತ್ತಿದ್ದ ಸೈನಿಕರನ್ನು ಕೊಂದು ಕೋಟೆಯನ್ನು ರಕ್ಷಿಸಿದ ಕಥೆ ಜನಜನಿತವಾಗಿದೆ.
ಉಕ್ಕಿನ ಕೋಟೆಯ ಅಭೇದ್ಯ ಗೋಡೆಗಳು

ಶ್ರೀ ರಾಜ ಉತ್ಸವಾಂಬ ಉಚ್ಚಂಗಿ ಎಲ್ಲಮ್ಮ ದೇವಾಲಯ
ಕೋಟೆಯಿಂದ ಕೆಳಗೆ ಇಳಿದು ಬಂದರೆ ಆನೆಬಾಗಿಲು ದಾರಿಯಲ್ಲಿ ಕಾಣಸಿಗುವ ರಾಜಉತ್ಸವಾಂಬ ಉಚ್ಚಂಗಿ ಎಲ್ಲಮ್ಮನ ದೇವಾಲಯ.
ಉಚ್ಚಂಗಿ ಎಲ್ಲಮ್ಮನ ದೇವಾಲಯದ ಒಳಗಿನ ಮಂಟಪ
ಉಚ್ಚಂಗಿ ಎಲ್ಲಮ್ಮನ ಉತ್ಸವಮೂರ್ತಿ

ಪ್ರಾಚ್ಯವಸ್ತು ಸಂಗ್ರಹಾಲಯ
ಉಚ್ಚಂಗಿ ಎಲ್ಲಮ್ಮನ ಉತ್ಸವಮೂರ್ತಿ
ಏಳುಸುತ್ತಿನ ಕೋಟೆಯ ಬಾಗಿಲುಗಳಲ್ಲಿ ಒಂದಾದ ರಂಗಯ್ಯನ ಬಾಗಿಲು ಬಳಿ ಇರುವ ಪ್ರಾಚ್ಯವಸ್ತು ಸಂಗ್ರಹಾಲಯ.

ಆಕಾಶವಾಣಿ ಕೇಂದ್ರ ಚಿತ್ರದುರ್ಗ
ಮಧ್ಯಕರ್ನಾಟಕದ ಅತ್ಯಂತ ಜನಪ್ರಿಯವಾದ ಎಫ್‌.ಎಂ. ಆಕಾಶವಾಣಿ ಕೇಂದ್ರವಾದ ಚಿತ್ರದುರ್ಗ ಆಕಾಶವಾಣಿ ಕೇಂದ್ರವು ಶೈಕ್ಷಣಿಕವಾಗಿ ಅಷ್ಟೇ ಅಲ್ಲದೆ, ಸಮೂಹ ಶಿಕ್ಷಣ ಮಾಧ್ಯಮವಾಗಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲ್ಪಡುತ್ತಿದೆ. ೧೯೯೧ರಲ್ಲಿ ಸ್ಥಾಪನೆಯಾಗಿ ಅತ್ಯಂತ ಯಶಸ್ವಿಯಾಗಿ ಮಕ್ಕಳ ಶೈಕ್ಷಣಿಕ ಕಾರ್ಯಕ್ರಮಗಳನ್ನು ಬಿತ್ತರಗೊಳಿಸುತ್ತಿದೆ. ಮಕ್ಕಳ ಶೈಕ್ಷಣಿಕ ಪ್ರವಾಸದ ದೃಷ್ಟಿಯಿಂದ ನೋಡಲೇಬೇಕಾದ ಕೇಂದ್ರವಾಗಿದೆ.


*********************************************************